ಚೆನ್ನೈ: ಅಚ್ಚರಿ ಎನ್ನುವಂತೆ ಭಾನುವಾರ ತಡರಾತ್ರಿ ಬೆಂಗಳೂರಿನಿಂದ ಹೃದಯವನ್ನು ಚೆನ್ನೈಗೆ ಸಾಗಿಸಲಾಗಿದೆ. ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ರಾತ್ರೋರಾತ್ರಿ ಪೆರುಂಬಕಂನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ಕೇವಲ 55 ನಿಮಿಷದಲ್ಲಿ ಸಾಗಿಸಿ ಯಶಸ್ವಿ ಜೋಡಣೆ ಮಾಡಲಾಗಿದೆ.
ರಾತ್ರಿ 12.50ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿ, 1.30ರ ಸುಮಾರಿಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿದೆ. 1.40ಕ್ಕೆ ಚೆನ್ನೈ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಹೃದಯವನ್ನು 15.5 ಕಿಲೋಮೀಟರ್ ದೂರದ ಆಸ್ಪತ್ರೆಗೆ ಕೇವಲ 14 ನಿಮಿಷಗಳಲ್ಲಿ ಸಾಗಿಸಲಾಗಿದೆ. ಊಹಿಸಿಕೊಳ್ಳಲಿಕ್ಕೂ ಆಗದ ರೀತಿಯಲ್ಲಿ ಹೃದಯವನ್ನು ಸಾಗಿಸಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಜತೆಗೆ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಕೈಗೊಂಡು ಹೃದಯ ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಮಾರ್ಗವನ್ನು ವಾಹನ ಮುಕ್ತವಾಗಿಸಲು 24 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಗೆ ವಕ್ತಾರ, ರೋಗಿ ಸ್ಥಿತಿ ಚಿಂತಾಜನಕವಾಗಿತ್ತು. ಹೃದಯ ಬದಲಾವಣೆಯೊಂದೇ ಮಾರ್ಗವಾಗಿತ್ತು. ವೈದ್ಯರ ಶ್ರಮದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ರೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.