ರಂಗಪಾರ (ಅಸ್ಸಾಂ): ಬ್ಯಾಂಕ್ ಗೆ ಮೋಸ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬ್ಯಾಂಕುಗಳಿಗೆ ಪಂಗನಾಮ ಹಾಕಿ ಜೈಲಿಗೆ ಹೋಗುವುದನ್ನು ತಪ್ಪಿಸಲು ದೇಶ ಬಿಟ್ಟವರ ವಿರುದ್ದ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಬ್ಯಾಂಕ್ಗೆ ಮೋಸ ಮಾಡಿದ ಮಲ್ಯ ಬಗ್ಗೆ ಮೋದಿ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಮೋದಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶ್ರೀಮಂತರಿಗಾಗಿಯೇ ಬ್ಯಾಂಕ್ಗಳನ್ನು ಆರಂಭಿಸಿತ್ತು. ಶ್ರೀಮಂತರು ಸಾರ್ವಜನಿಕ ದುಡ್ಡನ್ನು ಹೇಗೆ ಆಕ್ರಮಿಸಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೆ? ನನ್ನ ಸರ್ಕಾರ ಬ್ಯಾಂಕ್ಗೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ.
ಹಾಗೆ ಓಡಿ ಹೋಗುವವರು ಜೈಲಿಗೆ ಹೋಗಲು ಅಂಜುತ್ತಿದ್ದಾರೆ. ಆದರೆ ಯಾರೊಬ್ಬರನ್ನೂ ನಾವು ಸುಮ್ಮನೆ ಬಿಡುವುದಿಲ್ಲ.
ಬ್ಯಾಂಕ್ ನಿಂದ ದೋಚಿದ ಹಣ, ಅದು ಬ್ಯಾಂಕ್ನದ್ದಲ್ಲ. ಅದು ಈ ದೇಶದ ಬಡವರು ದುಡ್ಡು. ಹೀಗಿರುವಾಗ ನಯಾ ಪೈಸೆ ಬಾಕಿ ಉಳಿಯದಂತೆ ಲೆಕ್ಕಾ ಚುಕ್ತಾ ಮಾಡಿ ಅವರಿಂದಲೇ ಆ ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಅಸ್ಸಾಂನಲ್ಲಿ ಭಾನುವಾರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ ಮೋದಿ, ಇದೇ ಮೊದಲ ಬಾರಿಗೆ ವಿಜಯ್ ಮಲ್ಯ ವಿಷಯದಲ್ಲಿ ಮಾತನಾಡಿದ್ದಾರೆ.