ಕೋಲ್ಕತಾ: ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತ ವಿಚಾರವನ್ನು ತಮಾಷೆ ಮಾಡಿದ ಟಿವಿ ನಿರೂಪಕನ ವಿರುದ್ಧ ಮಾಜಿ ಆಟಗಾರ ಶೋಯೆಬ್ ಅಖ್ತರ್ ಗರಂ ಆಗಿದ್ದರು.
ಕಾರ್ಯಕ್ರಮದ ವೇಳೆ ಮೌಕಾ ಮೌಕಾ ಜಾಹಿರಾತನ್ನು ಹಿನ್ನಲೆಯಾಗಿಟ್ಟುಕೊಂಡು ನಿರೂಪಕ ತಮಾಷೆ ಮಾಡಿದ್ದರಿಂದ ಮುಜುಗರಕ್ಕೊಳಗಾದ ಅಖ್ತರ್ ಮುಲಾಜಿಲ್ಲದೇ ನಿರೂಪಕನನ್ನು ಅಲ್ಲಿಯೇ ಪ್ರಶ್ನಿಸಿದರು. ಸ್ಟಾರ್ ಸ್ಫೋರ್ಟ್ ವಾಹಿನಿ ನಡೆಸುತ್ತಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶೊಯೆಬ್ ಅಖ್ತರ್ ಮತ್ತು ಭಾರತ ಮಾಜಿ ನಾಯಕ ಕಪಿಲ್ ದೇವ್ ಅವರು ಪಾಲ್ಗೊಂಡಿದ್ದರು. ಈ ವೇಳೆ ನಿರೂಪಕ ಜತಿನ್ ಸಪ್ರು ಪಾಕ್ ಸೋಲಿನ ಕುರಿತು ಅಖ್ತರ್ ಅವರನ್ನು ಪ್ರಶ್ನಿಸುತ್ತಿದ್ದಂತೆಯೇ ನಕ್ಕರು.
ಇದರಿಂತ ಕೋಪಗೊಂಡ ಅಖ್ತರ್ ಪ್ರಶ್ನೆ ಕೇಳುವ ಮೊದಲು ನಕ್ಕರೇಕೆ ಎಂದು ಕೋಪದಿಂದಲೇ ಕೇಳಿದರು. ಆಗ ನಿರೂಪಕ ಅದಕ್ಕೆ ತೇಪೆ ಹಚ್ಚುವ ಕಾರ್ಯ ಮಾಡಿದನಾದರೂ, ಪ್ರಶ್ನೆ ಕೇಳುವಾಗ ಗಂಭೀರವಾಗಿರುವುದನ್ನು ತಿಳಿಯಬೇಕು ಎಂದು ಅಖ್ತರ್ ಹೇಳಿದರು. ಹೀಗಾಗಿ ಮಧ್ಯ ಪ್ರವೇಶಿಸಿದ ಕಪಿಲ್ ದೇವ್ ಬ್ರೇಕ್ ತೆಗೆದುಕೊಳ್ಳಲು ನಿರೂಪಕನಿಗೆ ಸಲಹೆ ನೀಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಅದರೆ ಇದನ್ನು ಓರ್ವ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಮುಂದೆ ತಮಾಷೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.