ತಿರುಪತಿ: ಈ ಬಾಲಕಿಗೆ ಜೀವನದಲ್ಲಿ ಎದುರಾದ ಅತಿ ದೊಡ್ಡ ಸಂದಿಗ್ಧ ಪರಿಸ್ಥಿತಿ ಇದು. ಒಂದೆಡೆ ಜೀವನದ ಮಹತ್ವದ ಘಟ್ಟವಾದ 10ನೇ ತರಗತಿ ಪರೀಕ್ಷೆ. ಮತ್ತೊಂದೆಡೆ ತನ್ನ ತಾಯಿಯ ಸಾವು. ಧೃತಿಗೆಡದೇ ತನ್ನ ತಾಯಿಯ ಕೊನೆ ಆಸೆಯಂತೆ ಪರೀಕ್ಷೆ ಬರೆಯುವುದನ್ನ ಆಯ್ಕೆ ಮಾಡಿಕೊಂಡಳು.
ಮಗಳು ಎಸ್ಎಸ್ಸಿ (10 ನೇ ತರಗತಿ) ಪರೀಕ್ಷೆ ಬರೆಯಲೆಂದು ಆಸೆ ಪಟ್ಟಿದ್ದ ತಾಯಿ, ಮಗಳು ಸಿದ್ಧವಾಗಿ ಪರೀಕ್ಷೆ ಬರೆಯಲು ಹೋಗುವ ಮುನ್ನವೇ ಮೃತಪಟ್ಟಿದ್ದಾಳೆ. ಇದರಿಂದ ಆಘಾತಕ್ಕೀಡಾದ ಮಗಳು ತಾಯಿಯ ಆಸೆಯಂತೆ ತಾಯಿಯ ಶವ ಬಿಟ್ಟು ಹೋಗಿ ಪರೀಕ್ಷೆಗೆ ಬರೆದು ಬಂದಿದ್ದಾಳೆ.
ಆಂಧ್ರಪ್ರದೇಶದ ತಿರುಪತಿಯ ನಿರ್ಮಲಾ ಮೃತ ಮಹಿಳೆ. ಈಕೆಯ ಮಗಳು ಜಯಶ್ರೀ ಪರೀಕ್ಷೆ ಬರೆದವಳು. ಸೋಮವಾರ ನಿರ್ಮಲಾ ತನ್ನ ಮಗಳನ್ನು ಎಸ್ಎಸ್ಸಿ ಪರೀಕ್ಷೆಗೆ ಕಳುಹಿಸಲು ಎಲ್ಲ ತಯಾರಿ ಮಾಡಿದ್ದಳು. ಈ ವೇಳೆ ಲಕ್ವಾ ಹೊಡೆದು ನಿರ್ಮಲಾ ದಿಢೀರ್ನೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಜಯಶ್ರೀ ಪರೀಕ್ಷೆಗೆ ಇನ್ನೇನು ಹೋಗಬೇಕು ಎನ್ನುವಾಗ ಈ ಘಟನೆ ನಡೆದಿದೆ. ಆಗ ಜಯಶ್ರೀ ಅಮ್ಮನ ಸಾವಿನ ನೋವು ನುಂಗಿ ಅಮ್ಮನ ಆಸೆಯಂತೆ ಎಸ್ಎಸ್ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಜಯಶ್ರೀ ಈ ನಿರ್ಧಾರಕ್ಕೆ ಕೆಲ ಸಂಬಂಧಿಕರು ಅಸಮಾಧಾನ ವ್ಯಕ್ತ ಪಡಿಸಿದರು.
ಪರೀಕ್ಷೆ ಬರೆದು ಮುಗಿಸಿ ಬಂದ ಬಳಿಕ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ. ತನ್ನ ತಾಯಿಯ ಆಸೆಯಂತೆ ಎಲ್ಲಾ ವಿಷಯಗಳ ಪರೀಕ್ಷೆ ಬರೆಯುವುದಾಗಿ ಜಯಶ್ರೀ ಹೇಳಿದ್ದಾಳೆ.