ಜೈಪುರದ,ಮಾ.21- ಅಂದು ಜನ ಅವರ ಹೆಸರು ಕೇಳಿದರೆ ಥರಗುಟ್ಟಿ ನಡುಗುತ್ತಿದ್ದರು. ಅವರು ಸಮಾಜ ಕಂಕಟಕರಾಗಿದ್ದರು. ಆದರೆ ಕಾಲ ಚಕ್ರ ತಿರುಗಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಚಂಬಲ್ ಕಣಿವೆ ಡಕಾಯಿತರು ಈಗ ಸಾಮಾಜಿಕ ಹೋರಾಟಗಾರರು. ಸುಮಾರು 25 ಜನ ಜನ ಕಟ್ಟಾ ಡಕಾಯಿತರು(ಮಾಜಿಗಳು) ಈಗ ಅರಣ್ಯ ನಾಶದ ವಿರುದ್ದ ಹೋರಾಡುತ್ತಿದ್ದಾರೆ.! ಹೌದು. ಅರಣ್ಯ ನಾಶದಿಂದಾಗಿ ಮಳೆ ಬಾರದೆ ಭೂಮಿ ಬೆಂದು ಹೋಗುತ್ತಿದೆ. ಇತ್ತೀಚೆಗೆ ಅರಣ್ಯ ನಾಶ ಎಗ್ಗಿಲ್ಲದೆ ನಡೆದಿದೆ. ಆದ್ದರಿಂದ ನಾವು ಈ ಅರಣ್ಯ ನಾಶದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಈ ಮಾಜಿ ಡಕಾಯಿತರು.
ನಿನ್ನೆ ಭಾನುವಾರ ವಿಶ್ವ ಅರಣ್ಯ ದಿನ. ಹೀಗಾಗಿ ಈ ಅರಣ್ಯ ದಿನದ ಉದ್ದೇಶ ಅರಣ್ಯದ ಸಂರಕ್ಷಣೆ ನಾವು ಅದಕ್ಕಾಗಿ ಹೋರಾಡುತ್ತೇವೆ ಎಂಬುದು ಅವರ ಅಚಲವಾದ ಹೇಳಿಕೆ.ನಾವು ಈ ಹಿಂದೆ ಅರಣ್ಯದಲ್ಲೇ ಬದುಕುತ್ತಿದ್ದೆವು. ಆಗ ನಾವು ಪ್ರಚಂಡ ಡಕಾಯಿತರಾಗಿದ್ದೆವು. ಜನ ನಮಗೆ ಹೆದರಿ ಅರಣ್ಯಕ್ಕೆ ಬರುತ್ತಿರಲಿಲ್ಲ. ಕಾಡಿನಲ್ಲಿ ಗಿಡಮರಗಳು ದಟ್ಟವಾಗಿದ್ದವು. ಅದರಿಂದ ಯಥೇಚ್ಛ ಮಳೆ ಬರುತ್ತಿತ್ತು. ಈಗ ನಾವು ಕಾಡು ಬಿಟ್ಟು ನಾಡಿಗೆ ಬಂದಿದ್ದೇವೆ. ಅತ್ತ ಕಾಡನ್ನು ರಕ್ಷಣೆ ಮಾಡುವವರಿಲ್ಲದಾಗಿದೆ. ಕಾಡೆಲ್ಲ ನಾಶವಾಗುತ್ತಿದೆ. ಮಳೆಯೂ ಇಲ್ಲ, ಕಾಡು ಪ್ರಾಣಿಗಳಿಗೂ ಉಳಿಗಾಲವಿಲ್ಲ ಎನ್ನುವ ಈ ನವ ನಾಗರಿಕರು, ಱಪೆಹ್ಲೆ ಬಸಾಯಾ ಬಿಹಾದ್ ಮತ್ತು ಅಬ್ ಬಚಾಯೋಗೆ ಬಿಹಾದ್ ( ಮೊದಲು ಕಾಡನ್ನು ಫಲವತ್ತಾಗಿಟ್ಟಿದ್ದೇವು, ಈಗಲೂ ಹಾಗೇ ಮಾಡುತ್ತೇವೆ) ಎಂಬ ಘೋಷ ವಾಕ್ಯದೊಂದಿಗೆ ಕಾಡು ರಕ್ಷಣೆಗೆ ಹೊರಟಿದ್ದಾರೆ.
ಸಾರ್ವಜನಿಕರಲ್ಲಿ ಅವರ ಮನವಿಯಿಷ್ಟೇ , ಕಾಡನ್ನು ರಕ್ಷಿಸಿ, ಸಮೃದ್ಧ ಮಳೆಯಾಗುತ್ತದೆ, ಮಳೆಯಾದರೆ ಇಡೀ ಜೀವ ಸಂಕುಲ ಬದುಕುತ್ತದೆ. ಭೂಮಿ ನಮ್ಮ ಮುಂದಿನ ಪೀಳಿಗೆಗೂ ಉಳಿಯುತ್ತದೆ ಎಂಬುದು.