ನವದೆಹಲಿ, ಮಾ. ೧೮- ಪೊಖ್ರಾನ್ ಮರುಭೂಮಿಯಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡ ನಾಯಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಮ್ಮುಖದಲ್ಲಿ ಭಾರತೀಯ ವಾಯುಪಡೆ ತನ್ನ ಸಮರ ಸಾಮರ್ಥ್ಯ ಹಾಗೂ ಅಸ್ತ್ರಗಳ ಬಲಾಬಲವನ್ನು ಪ್ರದರ್ಶಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಜರಿರುವರು.
ಈ ಪ್ರದರ್ಶನದಲ್ಲಿ ಯುದ್ಧ ವಿಮಾನದಿಂದ ಭೂಮಿ ಮೇಲಿರುವ ಗುರಿಗಳನ್ನು ಛಿದ್ರಗೊಳಿಸುವ ಹಾಗೂ ಆಕಾಶದಲ್ಲೇ ಗುರಿಗಳನ್ನು ಹೊಡೆದುರುಳಿಸುವ ಪ್ರಾತ್ಯಕ್ಷಿಕೆಗಳನ್ನು ವಾಯುಪಡೆ ವಿಮಾನಗಳು ನೀಡಲಿವೆಯಲ್ಲದೆ ಶತ್ರು ವಿಮಾನಗಳ ಗುರಿಗಳಿಗೆ ಸಿಗದೆ ತಪ್ಪಿಸಿಕೊಳ್ಳುವ ಬಗೆಯನ್ನೂ ಪ್ರದರ್ಶಿಸಲಾಗುತ್ತದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪ್ರದರ್ಶನವನ್ನು `ಕಬ್ಬಿಣದ ಮುಷ್ಟಿಯ ಅಭ್ಯಾಸ’ (ಎಕ್ಸರ್ಸೈಸಾ ಐರನ್ ಫಿಸ್ಟ್) ಎಂದು ಕರೆಯಲಾಗುತ್ತದೆ.
ಇದರಲ್ಲಿ ಸುಖೋಯ್-30, ಮಿರಾಜ್ 2000, ಜಾಗ್ವಾರ್, ಮಿಗ್-29, ಆಕ್ರಮಣ ನಡೆಸುವ ಹೆಲಿಕಾಪ್ಟರ್ಗಳು ದೂರಸಂವೇದಿ (ರಿಮೋಟ್ ಕಂಟ್ರೋಲ್ಡ್) ನಿಯಂತ್ರಣದ ವಿಮಾನಗಳು ಹಾಗೂ ಉನ್ನತ ತಂತ್ರಜ್ಞಾನದ ಎಡಬ್ಲ್ಯುಎಸಿ (ಅವಾಕ್) ವಿಮಾನಗಳು ಸೇರಿರುತ್ತವೆ.
ಭಾರತೀಯ ವಾಯುಪಡೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ರಾಷ್ಟ್ರಪತಿ `ಭಾರತ ಶಾಂತಿ ಮತ್ತು ಸಮಾನತೆಗೆ ಬದ್ಧವಾಗಿದೆ’ ಎಂದಿದ್ದಾರೆ.
ಇಂದು ಸಂಜೆ ನಡೆಯಲಿರುವ ಈ ಪ್ರದರ್ಶನದಲ್ಲಿ ಮೇಡ್ ಇನ್ ಇಂಡಿಯಾಕ್ಕೆ ಪ್ರಾಶಸ್ತ್ಯವಿರುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಎರಡೂ ಪ್ರದರ್ಶನಗಳಲ್ಲಿ ವಾಯುಸೇನೆಯ 180 ಯುದ್ಧ ವಿಮಾನಗಳು, ಸರಕು ಸಾಗಣೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಪಾಲ್ಗೊಳ್ಳಲಿವೆ.
ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಲಘು ಯುದ್ಧ ವಿಮಾನ ತೇಜಸ್, ಭೂಮಿಯಿಂದ ಆಕಾಶಕ್ಕೆ ಹಾರಿ ಬಿಡುವ ಆಕಾಶ್ ಕ್ಷಿಪಣಿ ಹಾಗೂ ರಾಕೆಟ್ಗಳ ಉಡಾವಣೆಯನ್ನೂ ಪ್ರದರ್ಶಿಸಲಾಗುವುದು.