ಇಂಫಾಲ್: ಮಣಿಪುರದ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದೊಡ್ಡುವ ಸನ್ನಿವೇಶದಲ್ಲಿ ಪೊಲೀಸ್ ಉಪ ಸೂಪರಿಂಟೆಂಡೆಂಟ್ ಥೌನೋಜಾಮ್ ಬೃಂದಾ ಅವರು ತಮ್ಮ ಕೆಲಸಕ್ಕ ರಾಜೀನಾಮೆ ನೀಡಿದ್ದಾರೆ.
“ನಾನು ಜನವರಿ ೨೬ ೨೦೧೬ ರಂದು ಪೊಲೀಸ ಮಹಾನಿರ್ದೇಶಕ ಎಲ್ ಎಂ ಖೌಟೆ ಅವರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ. ಸರ್ಕಾರ ಇದನ್ನು ಒಪ್ಪಿಕೊಳ್ಳುವ ಬದಲು, ಇದಕ್ಕಾಗಿ ತನಿಖಾ ಸಮಿತಿಯನ್ನು ನೇಮಕ ಮಾಡಿ ನನಗೆ ಮೂರು ಬಾರಿ ಸಮನ್ಸ್ ನೀಡಿದೆ. ಆದರೆ ಈ ಸಮಿತಿ ತಟಸ್ಥವಾಗಿಲ್ಲ, ಆದುದರಿಂದ ನಾನು ಸಮಿತಿಯ ಮುಂದೆ ಹಾಜರಾಗಿಲ್ಲ” ಎಂದು ಬೃಂದಾ ಹೇಳಿದ್ದಾರೆ.
ಸೋಮವಾರ ವರದಿಗಾರರೊಂದಿಗೆ ಮಾತನಾಡಿದ ಬೃಂದಾ, ಕಿರಿಕುಳ ಅಲ್ಲದೆ, ಇಲಾಖೆಯಲ್ಲಿ ನನ್ನನ್ನು ಸದಾ ಅನುಮಾನದಿಂದ ಕಾಣುತ್ತಿದ್ದರು “ನಾನು ಯು ಎನ್ ಎಲ್ ಎಫ್ ನುಸುಳುಕೋರ ಸಂಘಟನೆಯ ಅಧ್ಯಕ್ಷ ಆರ್ ಕೆ ಮೇಘನ್ ಅವರ ಸೊಸೆ” ಆಗಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
೨೦೧೨ರ ಮಣಿಪುರ ಸಾರ್ವಜನಿಯ ಸೇವಾ ಆಯೋಗ ಪರೀಕ್ಷೆಯಲ್ಲಿ ಬೃಂದಾ ಉತ್ತೀರ್ಣರಾಗಿದ್ದರೂ ಆವರಿಗೆ ಯಾವುದೇ ಹುದ್ದೆಯನ್ನು ನೀಡಿರಲಿಲ್ಲ. ಈ ನಿಟ್ಟಿನಲ್ಲಿ ಅವರು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
೨೦೧೩ ರಲ್ಲಿ ರಾಜ್ಯದ ಹೈಕೋರ್ಟ್ ಬೃಂದಾ ಅವರಿಗೆ ನೇಮಕಾತಿ ಪತ್ರ ನೀಡುವಂತೆ ಮಣಿಪುರ ಸರ್ಕಾರಕ್ಕೆ ಆದೇಶಿಸಿತ್ತು. ಅಂದಿನಿಂದ ೯ ಐ ಆರ್ ಬಿ ಮಹಿಳಾ ಬೆಟಾಲಿಯನ್ ನಲ್ಲಿ ಬೃಂದಾ ಕೆಲಸ ಮಾಡುತ್ತಿದ್ದರು, ಆದರೆ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.
“ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಪ್ರಸಕ್ತ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗಳಿಂದ ಬೇಸತ್ತಿದ್ದೇನೆ” ಎಂದು ಬೃಂದಾ ತಿಳಿಸಿದ್ದಾರೆ. ಈ ಮಧ್ಯೆ ಈ ಉನ್ನತ ರ್ಯಾಂಕ್ ಅಧಿಕಾರಿಯ ಮೇಲೆ ವಿಚಾರಣೆ ಆದೇಶಿಸಿರುವುದೇಕೆ ಎಂದು ಸರ್ಕಾರ ಸ್ಪಷ್ಟೀಕರಿಸಿಲ್ಲ.