ನಾಗಪುರ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 47 ರನ್ಗಳಿಂದ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿ ಕಿವೀಸ್ ನೀಡಿದ್ದ 127 ರನ್ ಗುರಿ ಮುಟ್ಟಲು ಆತಿಥೇಯರಿಗೆ ಸಾಧ್ಯವಾಗಲಿಲ್ಲ. ದೋನಿ ನಾಯಕತ್ವದ ತಂಡ 18.1 ಓವರ್ಗಳಲ್ಲಿ 79 ರನ್ ಕಲೆ ಹಾಕಿ ತನ್ನ ಹೋರಾಟವನ್ನು ಮುಗಿಸಿತು.
ಚುರುಕಿನ ಬೌಲಿಂಗ್ ಮಾಡಿದರೂ, ಬ್ಯಾಟಿಂಗ್ನಲ್ಲಿ ವೈಫಲ್ಯ ತಪ್ಪಲಿಲ್ಲ. ಇದರಿಂದಾಗಿ ಭಾರತ ತಂಡಕ್ಕೆ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲು ಕಾಡಿತು.
ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ತಂಡ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ಗಳಲ್ಲಿ 126 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು.
ಮೊದಲ ಓವರ್ನಲ್ಲಿಯೇ ಎರಡು ಸಿಕ್ಸರ್ ಸೇರಿದಂತೆ 13 ರನ್ ಕಲೆ ಹಾಕಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗುಪ್ಟಿಲ್ ಮತ್ತು ಕಾಲಿನ್ ಮನ್ರೊ ತಲಾ ಒಂದು ಸಿಕ್ಸರ್ ಬಾರಿಸಿದರು. ಆರಂಭದಲ್ಲಿ ಈ ತಂಡದ ಬ್ಯಾಟಿಂಗ್ ನೋಡಿದಾಗ ಸವಾಲಿನ ಗುರಿ ನೀಡಬಹುದು ಅಂದುಕೊಂಡಿದ್ದವರೇ ಹೆಚ್ಚು.
ಆದರೆ ಭಾರತ ಚುರುಕಿನ ಬೌಲಿಂಗ್ ನಡೆಸಿ ಎದುರಾಳಿ ತಂಡವನ್ನು ಬೇಗನೆ ಕಟ್ಟಿ ಹಾಕಿತ್ತು. ಈ ಸಾಧಾರಣ ಗುರಿಯೇ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಆತಿಥೇಯ ತಂಡದ ಬೆಟ್ಟದಂತ ಸವಾಲು ಎನಿಸಿತು. ತವರಿನ ತಂಡ ಅಂತಿಮವಾಗಿ 18.1 ಓವರ್ಗಳಲ್ಲಿ 79 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿತು.
ಆರಂಭದಲ್ಲಿಯೇ ಪೆಟ್ಟು: ಕಿವೀಸ್ ತಂಡ ಆರಂಭದಲ್ಲಿ ಅಬ್ಬರಿಸಿದಷ್ಟೇ ವೇಗವಾಗಿ ಆಘಾತ ಅನುಭವಿಸಿತು. ಈ ತಂಡದ ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸನ್, ಮನ್ರೊ, ಗ್ರಾಂಟ್ ಎಲಿಯಟ್ ಎರಡಂಕಿ ಮೊತ್ತ ಗಳಿಸದೇ ಪೆವಿಲಿಯನ್ ಸೇರಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಕೋರಿ ಆ್ಯಂಡರ್ಸನ್ ಆಸರೆಯಾದರು. ಬರೋಬ್ಬರಿ ಒಂದು ಗಂಟೆ ಕ್ರೀಸ್ನಲ್ಲಿದ್ದ ಅವರು 42 ಎಸೆತಗಳನ್ನು ಎದುರಿಸಿದರು. ಮೂರು ಬೌಂಡರಿ ಸೇರಿದಂತೆ 34 ರನ್ ಗಳಿಸಿದರು.
ಇದರಿಂದ ನ್ಯೂಜಿಲೆಂಡ್ ತಂಡ ಮೊದಲ ಹತ್ತು ಓವರ್ಗಳು ಮುಗಿದಾಗ 55 ರನ್ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿಯೂ ಕೊಂಚ ರನ್ ವೇಗ ಹೆಚ್ಚಿಸಿಕೊಂಡಿತು.
ಬ್ಯಾಟಿಂಗ್ ವೈಫಲ್ಯ: ಭಾರತ ತಂಡ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಬಲಿಷ್ಠವಾಗಿದೆ. ಹಿಂದಿನ ಸರಣಿಗಳಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವನ್ನು ಮಣಿಸಿತ್ತು.ಇದೇ ತಿಂಗಳ ಮೊದಲ ವಾರ ಬಾಂಗ್ಲಾದೇಶದಲ್ಲಿ ನಡೆದಿದ್ದ ಏಷ್ಯಾಕಪ್ನಲ್ಲಿ ಚಾಂಪಿಯನ್ ಆಗಿತ್ತು. ಆದ್ದರಿಂದ ಭಾರತದ ಮೇಲೆ ಭಾರಿ ಭರವಸೆಯಿತ್ತು. ಆದರೆ ಚುಟುಕು ಕ್ರಿಕೆಟ್ನ ಪರಿಣತ ಬ್ಯಾಟ್ಸ್ಮನ್ಗಳಾದ ಸುರೇಶ್ ರೈನಾ, ಯುವರಾಜ್ ಸಿಂಗ್ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯಿಂದ ಆಡಲಿಲ್ಲ.
ಆರಂಭಿಕ ಬ್ಯಾಟ್ಸ್ಮನ್ ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್, ರೈನಾ, ಯುವರಾಜ್ ಮತ್ತು ಭರವಸೆಯ ಯುವ ಆಟಗಾರ ಹಾರ್ದಿಕ್ ಪಾಂಡ್ಯ ಎರಡಂಕಿ ಗಳಿಸುವ ಮೊದಲೇ ಪೆವಿಲಿಯನ್ ಸೇರಿದರು.ಉಪನಾಯಕ ವಿರಾಟ್ ಕೊಹ್ಲಿ (23) ಮತ್ತು ನಾಯಕ ದೋನಿ (30) ಕೆಲ ಹೊತ್ತು ಕ್ರೀಸ್ನಲ್ಲಿದ್ದು ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಉಳಿದ ಬ್ಯಾಟ್ಸ್ಮನ್ಗಳಿಗೆ ಬೆಂಬಲ ಸಿಗಲಿಲ್ಲ. ಏಷ್ಯಾಕಪ್ನಲ್ಲಿ ಭಾರತ ಚಾಂಪಿಯನ್ ಆಗಲು ಕಾರಣರಾಗಿದ್ದ ದೋನಿ 30 ಎಸೆತಗಳನ್ನು ಎದುರಿಸಿ ಇಷ್ಟೇ ರನ್ಗಳನ್ನು ಬಾರಿಸಿದರು. ಒಂದು ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ವಿಕೆಟ್ಗಳು ಬೇಗನೆ ಉರುಳಿದ್ದರಿಂದ ದೋನಿ ಅವರಿಗೆ ರಕ್ಷಣಾತ್ಮಕವಾಗಿ ಆಡದೇ ಬೇರೆ ಹಾದಿ ಇರಲಿಲ್ಲ. ಇದರಿಂದ ರನ್ ವೇಗವೂ ಕುಸಿಯಿತು.
ಆತಿಥೇಯ ತಂಡ ಮೊದಲ ಓವರ್ನಲ್ಲಿಯೇ ವಿಕೆಟ್ ಕಳೆದು ಕೊಂಡಿತು. ತ ಂಡದ ಒಟ್ಟು ಮೊತ್ತ 39 ಆಗುವಷ್ಟರಲ್ಲಿ ಪ್ರಮುಖ ಐವರು ಬ್ಯಾಟ್ಸ್ಮನ್ಗಳು ಔಟಾಗಿದ್ದರು. ಈ ವೇಳೆ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಆಸೆಯೂ ಕಮರಿ ಹೋಗಿತ್ತು. ಆದರೆ ಕ್ರಿಕೆಟ್ ಪ್ರೇಮಿಗಳಿಗೆ ‘ದೋನಿ ಇದ್ದಾರೆ’ ಎನ್ನುವ ಭರವಸೆಯಿತ್ತು.
ಸ್ಪಿನ್ನರ್ಗಳ ಮಿಂಚು: ಕಿವೀಸ್ ತಂಡ ಗೆಲುವು ಪಡೆಯಲು ಸ್ಪಿನ್ನರ್ಗಳು ಕಾರಣರಾದರು. ನಥಾನ್ ಮೆಕ್ಲಮ್ ಎರಡು, ಮಿಷೆಲ್ ಸ್ಯಾಂಟಿನೆರ್ ನಾಲ್ಕು ಮತ್ತು ಈಶ್ ಸೋಧಿ ಮೂರು ವಿಕೆಟ್ ಕಬಳಿಸಿದರು.
ಭಾರತದ ಹತ್ತು ವಿಕೆಟ್ಗಳ ಪೈಕಿ ಒಂಬತ್ತು ವಿಕೆಟ್ಗಳನ್ನು ಸ್ಪಿನ್ನರ್ಗಳೇ ಕಬಳಿಸಿದರು. ವೇಗಿ ಆ್ಯಡಮ್ ಮಿಲ್ನೆ ಪಾಲಿಗೆ ಒಂದು ವಿಕೆಟ್ ಲಭಿಸಿತು.
ಗೌರವ: ಇತ್ತೀಚಿಗೆ ನಿಧನರಾದ ಕ್ರಿಕೆಟಿಗ ಮಾರ್ಟಿನ್ ಕ್ರೋವ್ ಅವರಿಗೆ ಈ ಪಂದ್ಯಕ್ಕೂ ಮೊದಲು ಎರಡೂ ತಂಡಗಳ ಆಟಗಾರರು ಮೌನ ನಮನ ಸಲ್ಲಿಸಿದರು.ಕಿವೀಸ್ ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿ ಪಂದ್ಯವಾಡಿದರು.