ರಾಷ್ಟ್ರೀಯ

ಗುಜರಾತ್ ಗೆ ಉಗ್ರರ ಪ್ರವೇಶ: ದೆಹಲಿ, ಉತ್ತರ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ

Pinterest LinkedIn Tumblr

ww

ನವದೆಹಲಿ/ಲಕ್ನೋ: ಪಾಕಿಸ್ತಾನದಿಂದ ಹತ್ತು ಮಂದಿ ಉಗ್ರರು ಗಡಿ ದಾಟಿ ಗುಜರಾತ್ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಕೂಡಲೇ ಭದ್ರತಾ ಪಡೆ ರಾಜಧಾನಿ ದೆಹಲಿಗೆ ವಿಶೇಷ ಮುನ್ನೆಚ್ಚರಿಕೆ ನೀಡಿದೆ.

ಉಗ್ರರು ರಾಜಧಾನಿಯತ್ತ ಆಗಮಿಸಿ ಅಲ್ಲಿ ಭಾರೀ ಸ್ಫೋಟ ನಡೆಸುವ ಸಂಚು ರೂಪಿಸುತ್ತಿದ್ದಾರೆ ಎಂದು ಭದ್ರತಾ ಪಡೆ ಸಂಶಯ ವ್ಯಕ್ತಪಡಿಸಿದೆ. ಹೀಗಾಗಿ ದೆಹಲಿಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ.ಇಂದು ಮಹಾಶಿವರಾತ್ರಿ ಆಗಿರುವುದರಿಂದ ಉಗ್ರರ ಸಂಭಾವ್ಯ ದಾಳಿಯನ್ನು ತಳ್ಳಿಹಾಕುವಂತಿಲ್ಲ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಪ್ರಮುಖ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ಉಗ್ರರ ಸಂಭಾವ್ಯ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದಲ್ಲಿ ಸಹ ಬಿಗಿ ಭದ್ರತೆ ಘೋಷಿಸಲಾಗಿದೆ.

ರಾಜ್ಯದ ಪ್ರಮುಖ ಶಿವ ದೇವಾಲಯಗಳು ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೂಡ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಕಾನ್ಪುರ, ಆಗ್ರಾ, ಲಕ್ನೋ, ಫೈಜಾಬಾದ್, ಗೋರಖ್ ಪುರ್, ಅಜಂಗರ್ ಮತ್ತು ಇತರ ಪ್ರಮುಖ ಸ್ಥಳಗಳ ಶಿವ ದೇವಾಲಯಗಳಲ್ಲಿ ವಿಶೇಷ ಜಾಗ್ರತೆ ಒದಗಿಸಲಾಗಿದೆ. ಉಗ್ರರು ಕನ್ವರಿಯಾ( ಪವಿತ್ರ ಗಂಗೆ ನೀರನ್ನು ಹೊತ್ತುಕೊಂಡು ಬರಿಗಾಲಿನಲ್ಲಿ ಹೋಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುವವರು) ಅವರ ಮೇಲೆ ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

Write A Comment