ನವದೆಹಲಿ: ಪಾಕಿಸ್ತಾನ ಮೂಲದ 10 ಮಂದಿ ಉಗ್ರರು ಭಾರತಕ್ಕೆ ನುಸುಳಿದ್ದು, ಗುಜರಾತ್ ರಾಜ್ಯದ ಮೇಲೆ ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ತನಿಖಾ ದಳ ಎನ್ ಎಸ್ ಎ ಮಹತ್ವದ ಮಾಹಿತಿ ನೀಡಿದೆ.
ನಾಳೆ ಶಿವರಾತ್ರಿ ಇದ್ದು, ಇದೇ ಸಂದರ್ಭದಲ್ಲಿ ಗುಜರಾತ್ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ನಾಸಿರ್ ಖಾನ್ ಜಂಜುವಾ ಅವರು ಭಾರತದ ಭದ್ರತಾ ಸಲಹೆಗಾ ಅಜಿತ್ ಧೋವಲ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಉಗ್ರ ದಾಳಿ ಕುರಿತು ಪಾಕಿಸ್ತಾನ ಎನ್ ಎಸ್ ಎ ಇದೇ ಮೊದಲ ಬಾರಿಗೆ ಭಾರತೀಯ ಭದ್ರತಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಗುಜರಾತ್ ಗೆ ಎನ್ ಎಸ್ ಜಿ ಕಮಾಂಡೋ ಪಡೆಗಳನ್ನು ತುರ್ತು ರವಾನೆ ಮಾಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಗುಜರಾತ್ ನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸ್ಥಳೀಯ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ರಾತ್ರಿಯಿಂದಲೇ ಗುಜರಾತ್ ರಾಜ್ಯದ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಪ್ರತಿಯೊಂದು ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರಮುಖವಾಗಿ ಸಮುದ್ರ ಗಡಿಯಲ್ಲಿ ಮತ್ತು ಬಂದರುಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ದೇವಾಲಯಗಳೇ ಉಗ್ರರ ಟಾರ್ಗೆಟ್
ಇದೇ ವೇಳೆ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಿರುವ ಭಯೋತ್ಪಾದಕರು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ದೇವಾಲಯಗಳೇ ಉಗ್ರ ಪ್ರಮುಖ ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ನಾಳೆ ಮಹಾಶಿವರಾತ್ರಿ ಇದ್ದು, ಗುಜರಾತ್ ಪ್ರಮುಖ ದೇವಾಲಯಗಳು ಜನಜಂಗುಳಿಯಿಂದ ತುಂಬಿರುತ್ತದೆ. ಇದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವ ಹುನ್ನಾರದಲ್ಲಿರುವ ಉಗ್ರರು ಅಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಕಚ್ ನಲ್ಲಿ ಶಂಕಿತ ಬೋಟ್ ವೊಂದು ಪತ್ತೆಯಾಗಿದ್ದು, ಪಾಕಿಸ್ತಾನ ಎನ್ ಎಸ್ ಎ ಎಚ್ಚರಿಕೆಗೆ ಪುಷ್ಟಿ ನೀಡುವಂತಾಗಿದೆ. ಒಟ್ಟಾರೆ ಇದೀಗ ಗುಜರಾತ್ ನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಇತರೆ ರಾಜ್ಯಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.