ಹೈದರಾಬಾದ್: ಶಾಲಾ ಶಿಕ್ಷಕಿ ಒಬ್ಬರ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಆಂಧ್ರಪ್ರದೇಶದ ಸಮಾಜ ಕಲ್ಯಾಣ ಮಂತ್ರಿ ರವೇಲ ಕಿಶೋರ್ ಬಾಬು ಅವರ ಪುತ್ರ ಸುಶೀಲ್ ಮತ್ತು ಕಾರು ಚಾಲಕ ಎಂ. ರಮೇಶ್ ಅವರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಲೆ ಮುಗಿಸಿಕೊಂಡು ಮನೆಯತ್ತ ಹೊರಟಿದ್ದ ಶಿಕ್ಷಕಿಯನ್ನು ಬಹು ದೂರದವರೆಗೆ ಕಾರಿನಲ್ಲಿ ಹಿಂಬಾಲಿಸಿದ ಇವರು ಬಂಜಾರಾ ಹಿಲ್ಸ್ ಸಮೀಪ ಆಕೆಗೆ ಚುಡಾಯಿಸಿ ಕೈ ಹಿಡಿದು ಕಾರಿನೊಳಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಕೂಡಲೇ ಆಕೆ ಕಿರುಚಿಕೊಂಡ ಪರಿಣಾಮವಾಗಿ ಆಕೆಯ ಪತಿ ಮತ್ತು ಸುತ್ತು ಮುತ್ತಲಿನ ಜನ ಜಮಾಯಿಸಿ ಮಂತ್ರಿ ಪುತ್ರ ಮತ್ತು ಕಾರು ಚಾಲಕನನ್ನು ಹಿಡಿದೆಳೆದು ಧರ್ಮದೇಟು ನೀಡಿ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ಒಪ್ಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಮಾನಭಂಗ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸುಶೀಲ್ ತಾನು ಮುಗ್ಧ ಎಂದು ಪ್ರತಿಪಾದಿಸಿದ್ದು, ಇದು ರಾಜಕೀಯ ಪ್ರೇರಿತ ದೂರು ಎಂದು ಹೇಳಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸಚಿವ ರಾವಲ ಕಿಶೋರ ಬಾಬ್ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.