ಚೆನ್ನೈ: ನಾನು ನಡೆಸುತ್ತಿರುವ ವ್ಯವಹಾರಗಳು ಕಾನೂನು ಬದ್ಧವಾಗಿವೆ, ಎಲ್ಲಾ ನಿಯಮಾವಳಿಗಳನ್ನೂ ನಾನು ಪಾಲಿಸುತ್ತಿದ್ದೇನೆ ಮತ್ತು ನಾನು ಯಾವುದೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸ್ಪಷ್ಟ ಪಡಿಸಿದ್ದಾರೆ.
ಕಾರ್ತಿ ಚಿದಂಬರಂ ವಿವಿಧ ದೇಶಗಳಲ್ಲಿ ಕಂಪನಿಗಳನ್ನು ಹೊಂದಿದ್ದಾರೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ಕಾರ್ತಿ ಅವರ ಕಂಪನಿಗಳ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ವರದಿ ಪ್ರಕಟವಾಗಿತ್ತು. ಜತೆಗೆ ಎಐಎಡಿಎಂಕೆ ಸಂಸತ್ತಿನಲ್ಲಿ ಪ್ರಕರಣದ ಸಂಬಂಧ ಚರ್ಚೆಗೆ ಮುಂದಾದ ಕಾರಣ ಕೋಲಾಹಲ ಉಂಟಾಗಿ, ಸದನವನ್ನು ಮುಂದೂಡಲಾಗಿಯಿತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಾರ್ತಿ ಚಿದಂಬರಂ ನನ್ನ ವಿರುದ್ಧ ವರದಿ ಪ್ರಕಟವಾಗಿದೆ, ಆದರೆ ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸುಳ್ಳು ಎಂದು ತಿಳಿಸಿದ್ದಾರೆ.
ಹಿನ್ನೆಲೆ:ಕೆಲ ತಿಂಗಳ ಹಿಂದಷ್ಟೇ ಏರ್ಸೆಲ್- ಮ್ಯಾಕ್ಸಿಸ್ ಡೀಲ್ ಸಂಬಂಧಿಸಿ ತಮಿಳುನಾಡಿನಲ್ಲಿರುವ ಕಾರ್ತಿಯ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ಹಾಗೂ 2ಜಿ ಹಗರಣ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಲಂಡನ್, ಸಿಂಗಾಪುರ, ದುಬೈ, ಮಲೇಷ್ಯಾ ಮುಂತಾದ ಹೆಸರಾಂತ ನಗರಗಳಲ್ಲಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಾರ್ತಿ ಹೂಡಿಕೆ ಮಾಡಿರುವುದು ತಿಳಿದುಬಂದಿದೆ. ಏರ್ಸೆಲ್- ಮ್ಯಾಕ್ಸಿಸ್ ಡೀಲ್ ನಿರ್ವಹಿಸಿದ್ದ ಕಾರ್ತಿಯ ಕಂಪನಿಯೂ ಅವ್ಯವಹಾರದಲ್ಲಿ ಭಾಗಿಯಾಗಿದೆ ಎಂಬ ಅನುಮಾನಕ್ಕೆ ಇದು ಪುಷ್ಠಿ ನೀಡಿದ್ದು, 14 ರಾಷ್ಟ್ರಗಳ ತನಿಖಾ ಏಜೆನ್ಸಿಗಳ ನೆರವು ಪಡೆದು ಮಾಹಿತಿ ಸಂಗ್ರಹಿಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಅಲ್ಲದೆ, 2ಜಿ ಪ್ರಕರಣ ಕುರಿತ ವಿಶೇಷ ಕೋರ್ಟ್ ಈ ಬಗ್ಗೆ ಸಿಂಗಾಪುರಕ್ಕೆ ಪತ್ರ ಬರೆದಿದ್ದು, 2006 ರಿಂದ 2014ರ ನಡುವಿನ ಕಾರ್ತಿ ವಹಿವಾಟು ಕುರಿತು ಮಾಹಿತಿ ಕೋರಿದೆ.