ನವದೆಹಲಿ: ನಾನೆಂದರೆ ಕೇಂದ್ರ ಸರ್ಕಾರಕ್ಕೆ ಭಯ. ಆದ್ದರಿಂದಲೇ ನಾನು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿನ ಘಟನೆಯ ಬಗ್ಗೆ ಸಂಸತ್ನಲ್ಲಿ ದನಿಯೆತ್ತುವಾಗ ಅದನ್ನು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಸಂಸತ್ನಲ್ಲಿ ಮಾತಾಡಬಲ್ಲೆ, ಆದರೆ ಕೇಂದ್ರ ಸರ್ಕಾರಕ್ಕೆ ನನ್ನನ್ನು ಕಂಡರೆ ಭಯ. ನಾನು ಸಂಸತ್ನಲ್ಲಿ ಹೇಳುತ್ತೇನೋ ಎಂಬ ಭಯ ಅವರಿಗಿದೆ. ಆದ್ದರಿಂದಲೇ ಅವರು ನನಗೆ ಮಾತನಾಡಲು ಬಿಡುವುದಿಲ್ಲ ಎಂದು ಮಾಧ್ಯಮದವರಲ್ಲಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಆದರೆ ಲೋಕಸಭೆಯಲ್ಲಿ ನಡೆದದ್ದು ಬೇರೆಯೇ ಆಗಿತ್ತು. ಜ್ಯೋತಿರಾದಿತ್ಯ ಸಿಂಧ್ಯಾ ಅವರು ಜೆಎನ್ಯು ವಿವಾದ ಮತ್ತು ರೋಹಿತ್ ಮೆಮುಲಾ ಆತ್ಮಹತ್ಯೆ ಬಗ್ಗೆ ಚರ್ಚೆ ಆರಂಭಿಸಿದಾಗ ರಾಹುಲ್ ಅವರ ಸೀಟಿನಲ್ಲಿ ಮೌನವಾಗಿಯೇ ಕುಳಿತಿದ್ದರು. ಅಷ್ಟೇ ಅಲ್ಲ ಈ ಎರಡು ವಿಷಯಗಳ ಚರ್ಚೆಗೆ ಸ್ಮೃತಿ ಇರಾನಿ ಉತ್ತರಿಸುವಾಗ ರಾಹುಲ್ ಮತ್ತು ಸಿಂಧ್ಯಾ ಇಬ್ಬರೂ ಸಂಸತ್ನಲ್ಲಿ ಹಾಜರಿರಲಿಲ್ಲ.