ನವದೆಹಲಿ: ನಿಯತಕಾಲಿಕ ಒಂದರ ಲೇಖನಕ್ಕೆ ಸಂಬಂಧಿಸಿದಂತೆ ಲೇಖಕಿ ಅರುಂಧತಿ ರಾಯ್ ಅವರಿಗೆ ಬಾಂಬೆ ಹೈಕೋರ್ಟಿನ ನಾಗಪುರ ಪೀಠವು ಜಾರಿಗೊಳಿಸಿದ ನ್ಯಾಯಾಲಯ ನಿಂದನೆ ನೋಟಿಸ್ಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಜನವರಿ 25ರಂದು ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ವಿನಾಯ್ತಿ ನೀಡುವಂತೆ ಅರುಂಧತಿ ರಾಯ್ ಅವರು ಮಾಡಿದ್ದ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಜಿ.ಎನ್ ಸಾಯಿಬಾಬಾ ಅವರ ಬಂಧನ ಬಗ್ಗೆ ಮತ್ತು ಈ ವರ್ಷದ ಆದಿಯಲ್ಲಿ ಅವರ ಜಾಮೀನು ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನಿಯತಕಾಲಿಕದಲ್ಲಿ ಬರೆದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಅರುಂಧತಿ ಅವರಿಗೆ ಕ್ರಿಮಿನಲ್ ನ್ಯಾಯಾಲಯ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ರಾಯ್ ಅವರು ತಾನು ‘ಕಾನೂನಿಗಿಂತ ಮೇಲೆ’ ಎಂದು ನಂಬಿದಂತೆ ಕಾಣುತ್ತದೆ ಎಂದು ಬಾಂಬೆ ನ್ಯಾಯಾಲಯ ನೋಟಿಸ್ ಜಾರಿ ಮಾಡುತ್ತಾ ಹೇಳಿತ್ತು.
ಗೊಡಚಿರೋಲಿ ಪೊಲೀಸರು ಸಾಯಿಬಾಬಾ ಅವರನ್ನು ಕಳೆದ ವರ್ಷ ಮಾವೋವಾದಿಗಳ ಜೊತೆಗಿನ ಸಂಪರ್ಕಕ್ಕಾಗಿ ಬಂಧಿಸಿದ್ದರು. ಜೂನ್ ತಿಂಗಳಿನಿಂದ ಸಾಯಿಬಾಬಾ ಜಾಮೀನನಲ್ಲಿ ಇದ್ದು ಬಳಿಕ ಜಾಮೀನನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು.