ನವದೆಹಲಿ/ ಇಸ್ಲಾಮಾಬಾದ್: ಪಂಜಾಬಿನ ಪಠಾಣ್ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನಿ ಭಯೋತ್ಪಾದಕರಿಂದ ನಡೆದ ದಾಳಿ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತೆ ಉಲ್ಟಾ ಹೊಡೆದಿದೆ. ದಾಳಿ ಸಂಬಂಧವಾಗಿ ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನ ಸುದ್ದಿಗಳನ್ನು ಪಾಕಿಸ್ತಾನ ಗುರುವಾರ ನಿರಾಕರಿಸಿದೆ.
‘ಮೌಲಾನಾ ಮಸೂದ್ ಬಂಧನದ ಬಗ್ಗೆ ನಮಗೇನೂ ಮಾಹಿತಿ ಇಲ್ಲ’ ಎಂದು ಪಾಕಿಸ್ತಾನದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ‘ಅಂತಹ ಬಂಧನಗಳ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಪಾಕಿಸ್ತಾನ ವಿದೇಶಾಂಗ ಸೇವೆಯ ವಕ್ತಾರ ಖಲೀಲುಲ್ಲಾ ಖಾಜಿ ಹೇಳಿದ್ದಾರೆ.
ಭಾರತ- ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಾಳೆ (ಜನವರಿ 15) ನಡೆಯುವುದಿಲ್ಲ. ದಿನಾಂಕ ನಿಗದಿ ಬಗ್ಗೆ ಉಭಯ ರಾಷ್ಟ್ರಗಳ ಸರ್ಕಾರಗಳು ಸಂಪರ್ಕದಲ್ಲಿವೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಭಾರತ- ಪಾಕ್ ವಿದೇಶಾಂಗ ಸಚಿವಾಲಯ ಮಟ್ಟದ ಮಾತುಕತೆ ಬಗ್ಗೆ ಭಾರತ ಈದಿನ ನಿರ್ಧರಿಸುವ ನಿರೀಕ್ಷೆ ಇದೆ.
ಪಠಾಣ್ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿ ಕುರಿತ ತನಿಖೆ ಚುರುಕುಗೊಳಿಸಿದ ಪಾಕಿಸ್ತಾನ ಜೆಇಎಂ ಮುಖ್ಯಸ್ಥ ಮಸೂದ್ ಮತ್ತು ಆತನ ಸಹೋದರ ಸೇರಿದಂತೆ ಹಲವಾರು ಮಂದಿಯನ್ನು ಬಂಧಿಸಿರುವುದಾಗಿಯೂ, ಜೆಇಎಂ ಕಚೇರಿಗಳಿಗೆ ಬೀಗಮುದ್ರೆ ಮಾಡಿರುವುದಾಗಿಯೂ ಪಾಕ್ ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು.