ಬರೇಲಿ: ‘ನಿತ್ಯವೂ ನನ್ನ ಮೇಲೆ 11 ಜನ ರಾಕ್ಷಸರು ಅತ್ಯಾಚಾರ ಮಾಡುತ್ತಿದ್ದರು. ವಿರೋಧಿಸಿದರೆ ಕ್ರೂರವಾಗಿ ಹಿಂಸಿಸುತ್ತಿದ್ದರು. ಊಟ ನೀಡದೆ ಉಪವಾಸ ಹಾಕುತ್ತಿದ್ದರು’ ಅಂತಾ ಆ ಮಹಿಳೆ ತನ್ನ ವ್ಯಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರೆ, ಠಾಣೆಯಲ್ಲಿದ್ದ ಪೊಲೀಸರೂ ಒಮ್ಮೆ ಕಣ್ಣೀರು ಒರೆಸಿಕೊಂಡಿದ್ದರು.
ಇದು ಬರೇಲಿಯ ಶಿಶ್ಗಡ್ ಪ್ರದೇಶದಿಂದ ಅಪಹರಿಸಲ್ಪಟ್ಟು ನವದೆಹಲಿಯಲ್ಲಿ ದುರುಳರ ಲೈಂಗಿಕ ತೃಷೆಗೆ ಬಲಿಯಾದ ಯುವತಿಯ ಕರುಣಾಜನಕ ಕತೆ. ತಿಂಗಳ ಹಿಂದೆ ಮನೆಗೆ ಹೊರಟಿದ್ದ ಶಬಾನಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಅದೇ ಗ್ರಾಮದ ಆರು ಜನ ಯುವಕರು ಅಪಹರಿಸಿ ದೆಹಲಿಗೆ ಕೊಂಡೊಯ್ದಿದ್ದಾರೆ.
ಅಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಿ ನಿತ್ಯವೂ 11 ಜನರು ಶಬಾನಾ ಮೇಲೆ ಅತ್ಯಾಚಾರ ನಡೆಸಿದ್ದಾರೆ. ದುಷ್ಟರ ಕಪಿಮುಷ್ಠಿಯಿಂದ ಪಾರಾಗುವಲ್ಲಿ ಯಶಸ್ವಿಯಾದ ಶಬಾನಾ, ಕೊನೆಗೂ ಬರೇಲಿ ತಲುಪಿದ್ದು, ಎಎಸ್ಪಿ ಕಚೇರಿ ತಲುಪಿ ತನ್ನ ವ್ಯಥೆಯನ್ನು ಪೊಲೀಸರ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾಳೆ.
ಇದೇ ವೇಳೆ ಆರೋಪಿತರಲ್ಲಿ ಯುವತಿಯ ಗಂಡನ ಹೆಸರೂ ಕೂಡ ಕೇಳಿ ಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಗ್ರಾಮೀಣ ಎಎಸ್ಪಿ ಬ್ರಿಜೇಶ್ ಶ್ರೀವಾಸ್ತವ್ ಭರವಸೆ ನೀಡಿದ್ದಾರೆ.
ಸದ್ಯ ಯುವತಿ ನೀಡಿದ ದೂರಿನ ಆಧಾರದ ಮೇಲೆ ಗ್ರಾಮದ ಆರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇತರ ಐದು ಜನ ಆರೋಪಿಗಳಿಗೆ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.