ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿಯವರ ಜಾಗದಲ್ಲಿದ್ದಿದ್ದರೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ವಜಾ ಮಾಡುತ್ತಿದ್ದೆ ಎಂದಿದ್ದಾರೆ.
“ಶ್ರೀ ನರೇಂದ್ರ ಮೋದಿಯವರ ಸ್ಥಾನದಲ್ಲಿ ನಾನಿದ್ದರೆ, ಜೇಟ್ಲೀಜಿ ಅವರನ್ನು ಕೂಡಲೆ ತೆಗೆದುಹಾಕುತ್ತಿದ್ದು” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಅರುಣ್ ಜೇಟ್ಲಿ ಅವರು ದೆಹಲಿ ಕ್ರಿಕೆಟ್ ಮಂಡಲಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಆದರೆ ಜೇಟ್ಲಿ ಬೆಂಬಲಕ್ಕೆ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಮತ್ತು ಮೋದಿ ನಿಂತಿದ್ದು, ಅರುಣ್ ಜೇಟ್ಲಿ ದೋಷಮುಕ್ತರಾಗಿ ಹೊರಹೊಮ್ಮಲಿದ್ದಾರೆ ಎಂದು ನೆನ್ನೆಯಷ್ಟೇ ಪ್ರಧಾನಿ ಹೇಳಿದ್ದರು.
ಕ್ರೀಡಾ ಮಂಡಲಿಗಳು ರಾಜಕಾರಣಿಗಳಿಂದ ಮುಕ್ತವಾಗಿರಬೇಕು ಮತ್ತು ವೃತ್ತಿಪರರು ಅವುಗಳನ್ನು ಮುನ್ನಡೆಸಬೇಕು ಎಂದು ಕೂಡ ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.