ರಾಷ್ಟ್ರೀಯ

ಜೇಟ್ಲಿ ಅವರ ಡಿಡಿಸಿಎ ಹಗರಣದ ಫೈಲ್‌ಗಾಗಿ ಸಿಬಿಐ ದಾಳಿ ನಡೆಸಿದೆ: ಕೇಜ್ರಿವಾಲ್

Pinterest LinkedIn Tumblr

arvind-15

ನವದೆಹಲಿ: ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲಿನ ಸಿಬಿಐ ದಾಳಿಯ ಬಳಿಕ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಮರ ಆರಂಭವಾಗಿದೆ.

ಸಿಬಿಐ ಅಧಿಕಾರಿಗಳು ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ರಾಜೇಂದ್ರ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದ್ದು ಎಂದು ದೆಹಲಿ ಸಿಎಂ ಕೇಜ್ರಿವಾಲ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವಿಟರ್ ನಲ್ಲಿ ಜೇಟ್ಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್ ಅವರು, ಡಿಡಿಸಿಎ ಹಗರಣದ ತನಿಖೆಯ ಬಗ್ಗೆ ನಿಮಗೇಕೆ ಭಯ? ಹಗರಣದಲ್ಲಿ ನಿಮ್ಮ ಪಾತ್ರವೇನು? ಎಂದು ಜೇಟ್ಲಿ ಅವರನ್ನು ಪ್ರಶ್ನಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿಲ್ಲ ಎಂದು ಹೇಳುವ ಮೂಲಕ ಹಣಕಾಸು ಸಚಿವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.

ರಾಜೇಂದ್ರ ಕುಮಾರ್‌ ಕಚೇರಿ ಮೇಲಿನ ದಾಳಿ ಕೇವಲ ನೆಪವಷ್ಟೇ. ಸಿಬಿಐನವರು ನಿಜವಾಗಿ ಶೋಧಿಸಲು ಬಂದದ್ದು ನನ್ನ ಕಚೇರಿಯನ್ನು. ಕೇಂದ್ರ ಮಂತ್ರಿ ಅರುಣ್‌ ಜೇಟ್ಲಿ ಅವರು ಈ ಹಿಂದೆ ನಡೆದ ದಿಲ್ಲಿ ಕ್ರಿಕೆಟ್‌ ಸಂಸ್ಥೆ(ಡಿಡಿಸಿಎ) ಹಗರಣದಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಕಡತಗಳು ನನ್ನ ಕಚೇರಿಯಲ್ಲಿವೆ. ನಾನು ಈ ಬಗ್ಗೆ ಇನ್ನೇನು ತನಿಖೆಗೆ ಆದೇಶಿಸುವವನಿದ್ದೆ. ಅಷ್ಟೊತ್ತಿಗಾಗಲೇ ಜೈಲಿಗೆ ಹೋಗುವ ಭೀತಿಯಿಂದ ಜೇಟ್ಲಿ ಅವರು ತಮ್ಮ ಕುರಿತ ಕಡತವನ್ನು ಪತ್ತೆ ಮಾಡಿಸಲು ನನ್ನ ಕಚೇರಿ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದಾರೆ.

Write A Comment