ಪಣಜಿ: ಇಂಗ್ಲೀಷ್ ಶಿಕ್ಷಣ ಮಾನವೀಯತೆ ಮತ್ತು ದೇಶಭಕ್ತಿಯನ್ನು ಬೋಧಿಸಲಾರದು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಭಾನುವಾರ ಹೇಳಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ ಸಂಘದ ಸಂಸ್ಥಾಪಕ ಕೆ.ಬಿ.ಹೆಗ್ಡೆವಾರ್ ಪ್ರತಿಮೆಯನ್ನು ಅನಾವರಣಗೊಳಿಸಿ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಭಾಗ್ವತ್, “ಆಂಗ್ಲ ಶಿಕ್ಷಣ ಕೇವಲ ದೈನಂದಿನ ಹೊಟ್ಟೆಪಾಡಿಗಾಗಿ ನಮ್ಮನ್ನು ತರಬೇತಿಗೊಳಿಸುತ್ತದೆ. ಇದು ವಿವೇಕಾನಂದರ ಅಭಿಪ್ರಾಯ. ಕೇವಲ ಅನ್ನಕ್ಕಾಗಿ ದುಡಿಯುವ ಶಿಕ್ಷಣದ ಬದಲು ಮಾನವ ಕುಲ ಮತ್ತು ರಾಷ್ಟ್ರದ ಅಭಿವೃದ್ಧಿ ಬಗ್ಗೆ ಹೇಳಿಕೊಡುವಂತಹ ಶಿಕ್ಷಣ ನಮಗೆ ಬೇಕು”, ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ನನ್ನ ಶಿಕ್ಷಣದ ಪರಿಮಳವನ್ನು ನಮ್ಮ ದೇಶದ ಒಳಿತಿಗಾಗಿ ಪಸರಿಸಲು ನನ್ನಿಂದ ಸಾಧ್ಯವಾಗದಿದ್ದರೆ , ನಾ ಪಡೆದ ಶಿಕ್ಷಣ ಅನುಪಯುಕ್ತ ಎಂದು ವೀರ ಸಾವರ್ಕರ್ ಅವರು ಹೇಳಿದ್ದರು. ಕತ್ತೆಗಳು ಸಹ ಪುಸ್ತಕದ ಭಾರವನ್ನು ಹೊತ್ತುಕೊಂಡು ಸುತ್ತಾಡಲು ಶಕ್ತ್ಯವಾಗಿವೆ”, ಎಂದು ಭಾಗ್ವತ್ ತಿಳಿಸಿದ್ದಾರೆ.
ಗೋವಾ ಮುಖ್ಯಮಂತ್ರಿ, ಶಿಕ್ಷಣ ಸಚಿವ ಲಕ್ಷ್ಮೀಕಾಂತ ಪರ್ಸೇಕರ್, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಗೋವಾ ವಿಶ್ವ ವಿದ್ಯಾಲಯದ ಕುಲಪತಿ ಸತೀಶ್ ಸೆಟ್ಯೆ, ಕುಲ ಸಚಿವ ವಿ. ಪಿ. ಕಾಮತ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.