ಚೆನ್ನೈ: ಶನಿವಾರ ಚೆನ್ನೈ ಏರ್ ಪೋರ್ಟ್ ನಲ್ಲಿ ಕೆಲವೇ ಕೆಲವು ವಿಮಾನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮಧ್ಯಾಹ್ನದವರೆಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತ 4 ವಿಮಾನಗಳು ಟೇಕ್ ಆಫ್ ಆದವು. ಮಂಗಳವಾರ ಸಂಜೆಯಿಂದ ಶನಿವಾರದವರೆಗೆ ಇಲ್ಲಿಂದ ಒಂದೇ ಒಂದು ವಿಮಾನವೂ ಸಂಚಾರ ಆರಂಭಿಸಿರಲಿಲ್ಲ.
ಏರ್ ಪೋರ್ಟ್ನ ಕೆಳ ಅಂತಸ್ತು ಇನ್ನೂ ಜಲಾವೃತವಾಗಿರುವ ಕಾರಣ ಕಮರ್ಷಿಯಲ್ ವಿಮಾನಗಳ ಸಂಚಾರಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ. 2-3 ದಿನಗಳ ಬಳಿಕ ಈ ವಿಮಾನಗಳೂ ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.
ಟ್ಯುಟಿಕೋರಿನ್ ಸಹಜ ಸ್ಥಿತಿಗೆ: ಪ್ರವಾಹ ಪೀಡಿತ ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯು ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಈಗ ಸರ್ಕಾರಿ ಅಧಿಕಾರಿಗಳು ಹಾಗೂ ರಕ್ಷಣಾ ಕಾರ್ಯಕರ್ತರು ವಸತಿ ಪ್ರದೇಶಗಳಲ್ಲಿನ ನೀರನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ.
ಇಲ್ಲಿನ ಬಹುತೇಕ ಜಾಗಗಳಲ್ಲಿ ವಿದ್ಯುತ್ ಪೂರೈಕೆಯೂ ಆರಂಭವಾಗಿದೆ. ಹೀಗಾಗಿ ರಸ್ತೆಗಳನ್ನು ರಿಪೇರಿ ಮಾಡುವ, ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಆರಂಭವಾಗಿದೆ.