ಚೆನ್ನೈ: ಕಳೆದ ರಾತ್ರಿಯಿಂದ ಚೆನ್ನೈನಲ್ಲಿ ಮಳೆ ಬಿದ್ದಿಲ್ಲದಿದ್ದರೂ ನಗರದ ಅನೇಕ ಭಾಗಗಳಲ್ಲಿ ಪ್ರವಾಹದ ಮಟ್ಟ ಏರುತ್ತಲೇ ಇದೆ. ಚೆನ್ನೈ ಹೊರವಲಯದ 35 ಕೆರೆಗಳ ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಹೆಚ್ಚುವರಿ ನೀರು ಚೆನ್ನೈಗೆ ಹರಿದುಬರುತ್ತಿರುವುದರಿಂದ ಇನ್ನಷ್ಟು ಪ್ರವಾಹದ ಭೀತಿ ಆವರಿಸಿದೆ. ಅಡ್ಯಾರ್ ನದಿ ಮೇಲಿರುವ ಸೈದಾಪೇಟೆ ಸೇತುವೆಯಲ್ಲಿ ನಿನ್ನೆ ಸಂಚಾರ ಸ್ಥಗಿತಗೊಳಿಸಲಾಯಿತು. ಕೆರೆಯ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದಿಂದ ನದಿ ತುಂಬಿ ಹರಿಯುತ್ತಿದೆ. ಮಳೆ ಒಂದು ವಾರದವರೆಗೆ ಮುಂದುವರಿಯುವುದರಿಂದ ಮುಂದಿನ 48 ಗಂಟೆಗಳು ನಿರ್ಣಾಯಕವಾಗಿವೆ. ಪ್ರವಾಹ ಸ್ಥಿತಿ ಉಂಟಾದಾಗಿನಿಂದ ಸುಮಾರು 200 ಜನರು ಮೃತಪಟ್ಟಿದ್ದಾರೆ.
ಚೆನ್ನೈ ವಿಮಾನನಿಲ್ದಾಣವನ್ನು ಡಿ. 6ವರೆಗೆ ಮುಚ್ಚಲಾಗಿದೆ. ಅರಕ್ಕೋಣಂನಲ್ಲಿರುವ ರಾಜಾಜಿ ನೌಕಾ ವಾಯುನೆಲೆಯನ್ನು ತಾತ್ಕಾಲಿಕ ವಿಮಾನನಿಲ್ದಾಣವಾಗಿ ಬಳಸಲಾಗುತ್ತದೆ. ನೌಕಾಪಡೆಯ ಐಎನ್ಎಸ್ ಐರಾವತ್ ಔಷಧಿ ಸಾಮಗ್ರಿ, ಔಷಧಿಗಳು ಮತ್ತು ವೈದ್ಯರ ತಂಡದೊಂದಿಗೆ ಚೆನ್ನೈಗೆ ತೆರಳಿದೆ. ಹಡಗಿನಲ್ಲಿ 20ಈಜುಗಾರರು ಮತ್ತು 15 ದೋಣಿಗಳನ್ನು ತುಂಬಿಕೊಂಡು ಪ್ರಯಾಣ ಬೆಳೆಸಿದೆ.
ಬಿಎಸ್ಸೆನ್ನೆಲ್, ಏರ್ಟೆಲ್, ವೊಡಾಫೋನ್, ಏರ್ಸೆಲ್ ಗ್ರಾಹಕರಿಗೆ ಉಚಿತ ಟಾಕ್ಟೈಮ್ ವ್ಯವಸ್ಥೆ ಕಲ್ಪಿಸಿದೆ. ಶಾಲೆ, ಕಾಲೇಜು ಮತ್ತು ಕಚೇರಿಗಳನ್ನು ಮುಚ್ಚಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಚೆನ್ನೈನ ಪರಿಸ್ಥಿತಿ ಕುರಿತು ನಿನ್ನೆ ರಾತ್ರಿ ಜಯಲಲಿತಾ ಅವರಿಗೆ ಕರೆ ಮಾಡಿ ವಿಚಾರಿಸಿದರು. ಈ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ನಿನ್ನೆ ಚರ್ಚೆ ನಡೆಯಿತು.