ನವದೆಹಲಿ: 2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕನ್ನು ಡಿ. 22ರಂದು ಬಂಧಮುಕ್ತಗೊಳಿಸಲಾಗುವುದಿಲ್ಲ ಎಂದು ಬಲ್ಲ ಮೂಲಗಳು ಹೇಳಿವೆ. ಡಿ. 22ರಂದು ಅತ್ಯಾಚಾರಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ ಮೂಲಗಳು ಆ ದಿನ ಆತನನ್ನು ಸ್ಪೆಷಲ್ ಹೋಂಗೆ ಕಳುಹಿಸಲಾಗುವುದು ಎಂದು ಹೇಳಿವೆ.
ನಿರ್ಭಯಾ ಅತ್ಯಾಚಾರದ ಅಪರಾಧಿಗೆ ಈಗ 21 ವರುಷವಾಗಿದ್ದು, ಒಂದು ವರ್ಷಗಳ ಕಾಲ ಆತನನ್ನು ಎನ್ಜಿಒ ಒಂದರಲ್ಲಿ ಇರಿಸಲಾಗುವುದು. ಆದಾಗ್ಯೂ, ಅಪರಾಧಿಯನ್ನು ಬಿಡುಗಡೆಗೊಳಿಸುವ ಬದಲು ಒಂದು ವರ್ಷ ಎನ್ಜಿಒದಲ್ಲಿ ಇರಿಸುವುದರ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ ಎಂಬುದು ಅತೀವ ದುಃಖಕ್ಕೀಡು ಮಾಡುತ್ತದೆ ಎಂದು ನಿರ್ಭಯಾಳ ಅಮ್ಮ ಆಶಾ ದೇವಿ ಹೇಳಿದ್ದಾರೆ.
ನನ್ನ ಮಗಳನ್ನು ಅತ್ಯಾಚಾರಗೈದು ಕೊಲೆಗೈದ ಸಮಯದಲ್ಲೇ ಅತ್ಯಾಚಾರಿಗಳನ್ನು ಬಂಧಮುಕ್ತಗೊಳಿಸುತ್ತಿರುವ ಸುದ್ದಿ ಕೇಳಿ ಬೇಸರವಾಗಿತ್ತು. ನನ್ನ ಮಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಹೊಣೆ ಎಂದು ಆಶಾ ದೇವಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.