ನವದೆಹಲಿ: ಸತತ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ತಮಿಳುನಾಡಿಗೆ ರಾಜ್ಯ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಕ್ಷಣಕ್ಕೆ ರು.5 ಕೋಟಿ ನೆರವು ನೀಡಲಾಗಿದೆ.
ಸಾರಿಗೆ, ಔಷಧ, ಆಹಾರ ಸೇರಿದಂತೆ ಯಾವುದೇ ರೀತಿಯ ನೆರವು ಬೇಕಾದರೂ ನೀಡಲು ರಾಜ್ಯ ಸಿದ್ಧವಿದೆ. ಈ ಸಂಬಂಧ ತಮಿಳುನಾಡು ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಿಡಿದ ಸೆಲೆಬ್ರಿಟಿಗಳು
ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ರಿಷಿ ಕಪೂರ್, ಫರ್ಹಾನ್ ಅಖ್ತರ್ ಮುಂತಾದವರು ಚೆನ್ನೈ ಮಳೆ ಸಂತ್ರಸ್ತರಿಗಾಗಿ ಮಿಡಿದಿದ್ದಾರೆ. ಚೆನ್ನೈ ಮಳೆಯಲ್ಲಿ ಸಿಕ್ಕಿಕೊಂಡವರಿಗಾಗಿ ಅಮಿತಾಭ್ ಬಚ್ಚನ್ ಟ್ವಿಟ್ಟರ್ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾದವರಿಗೆ ಹೃದಯಪೂರ್ವಕ ಸಹಾಯ ಸೂಚಿಸಿದ್ದಾರೆ. ರಿಷಿಕಪೂರ್ ಹೆಲ್ಪ್ಲೈನ್ ಸಂಖ್ಯೆಗಳನ್ನು ಟ್ವಿಟ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್, ಪರಿಣೀತಿ ಚೋಪ್ರಾ ಮುಂತಾದವರು ಸಂತ್ರಸ್ತರಿಗೆ ನೆರವಾಗುವಂತೆ ಜನತೆಗೆ ಕಳಕಳಿಯ ಮನವಿ ಮಾಡಿದ್ದಾರೆ. ರವೀನಾ ಟಂಡನ್, ದಿಯಾ ಮಿರ್ಜಾ ಮುಂತಾದವರು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದವರಿಗೆ ಅಭಿನಂದನೆ ಸೂಚಿಸಿದ್ದಾರೆ.