ನವದೆಹಲಿ: ರಾಜೀವ್ ಹಂತಕರ ಬಿಡುಗಡೆಗೆ ಸುಪ್ರೀಂಕೋರ್ಟ್ ನಕಾರ ಸೂಚಿಸಿದ್ದು, ಎಲ್ಲಾ ಹಂತಕರಿಗೆ ಜೀವಾವಧಿ ಶಿಕ್ಷೆ ಮುಂದುವರಿಸಿದೆ. ತಮಿಳುನಾಡು ರಾಜ್ಯಸರ್ಕಾರ ರಾಜೀವ್ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು.
ಇದರಿಂದಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಜೈಲೇ ಗತಿಯಾಗಿದೆ. ತಮಿಳುನಾಡು ಸರ್ಕಾರದ ನಿರ್ಧಾರ ಸರಿಯಿಲ್ಲ. ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರಕ್ಕೆ ಅಧಿಕಾರವಿಲ್ಲ. ಇದು ಭಯೋತ್ಪಾದಕರಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಈ ವಿಚಾರವಾಗಿ ಕೇಂದ್ರದ ಜತೆ ಚರ್ಚಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಿಬಿಐ ತನಿಖೆ ಮಾಡಿದ್ದರಿಂದ ಕೇಂದ್ರದ ಅನುಮತಿ ಬೇಕು ಎಂದು ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿತು. ಇದರಿಂದಾಗಿ ನಳಿನಿ, ಶಾಂತನ್, ಪೆರಾರಿವಲನ್ ಮತ್ತು ಮುರುಗನ್ ಬಿಡುಗಡೆಗೆ ಅಡ್ಡಿಯಾಗಿದ್ದು ಜೈಲಿನಲ್ಲೇ ಉಳಿಯಬೇಕಾಗಿದ್ದು, ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ.