ನವದೆಹಲಿ: ದಾದ್ರಿ ಹತ್ಯೆಗೆ ಯಾವುದೇ ರೀತಿಯ ಕೋಮು ಸಂಬಂಧವಾಗಲೀ ಗೋಮಾಂಸ ಸಂಬಂಧವಾಗಲೀ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ವರದಿಯಿಂದ ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದಾದ್ರಿಯ ಬಿಶಾಡಾ ಗ್ರಾಮದಲ್ಲಿ ಮನೆಯೊಂದರಲ್ಲಿ ಗೋಮಾಂಸ ತಿಂದಿದ್ದಾರೆ ಮತ್ತು ಗೋಮಾಂಸವನ್ನು ಶೇಖರಿಸಿಟ್ಟುಕೊಂಡಿದ್ದಾರೆ ಎಂಬ ವದಂತಿಯಿಂದ ಕೋಪೋದ್ರಿಕ್ತವಾಗಿದ್ದ ಜನ ಸಮೂಹವೊಂದು ವಿವೇಚನೆಯನ್ನು ಕಳೆದುಕೊಂಡು ಮನೆಯ ಯಜಮಾನ ಮೊಹಮ್ಮದ್ ಇಖಲಾಕ್ ಎಂಬವರನ್ನು ಹೊಡೆದು ಸಾಯಿಸಿತ್ತು. ಮಾತ್ರವಲ್ಲದೆ ಆತನ ಪುತ್ರನ ಮೇಲೂ ಹಲ್ಲೆ ಮಾಡಿತ್ತು, ಇದರಿಂದ ದೇಶಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಇದೀಗ ಉತ್ತರ ಪ್ರದೇಶ ಸರಕಾರವು ದಾದ್ರಿ ಘಟನೆಯ ಆಮೂಲಾಗ್ರ ತನಿಖೆ ನಡೆಸಿ ಈ ಘಟನೆಗೆ ಕೋಮು ಸಂಬಂಧವಾಗಲೀ ಗೋಮಾಂಸ ಸಂಬಂಧವಾಗಲೀ ಇಲ್ಲವೆಂದು ಖಾತರಿಪಡಿಸುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಈ ವಿಷಯವನ್ನು ಇಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿದರು.
ಇದರಿಂದ ಕೆರಳಿದ ವಿಪಕ್ಷಗಳ ಸುಗಮ ಕಲಾಪ ನಡೆಯಲು ಬಿಡಲಿಲ್ಲ ಹೀಗಾಗಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.