ಬರೇಲಿ: ದೇಶದಲ್ಲಿ ಅಸಹಿಷ್ಣುತೆಯ ಬಗ್ಗೆ ಚರ್ಚೆ ವ್ಯಾಪಕವಾಗಿರುವಂತೆಯೇ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದ ಘಟನೆ ದೇಶದಲ್ಲಿ ಇನ್ನೂ ಕೋಮುಸಾಮರಸ್ಯತೆ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಜೈಲಿನಲ್ಲಿದ್ದ 15 ಹಿಂದೂಗಳ ಬಿಡುಗಡೆಗೆ ಮುಸ್ಲಿಂ ಸಮುದಾಯದ ಮುಖಂಡರು ಒಂದಾಗಿ 50 ಸಾವಿರ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಸಹಕರಿಸಿದ್ದಾರೆ.
ಕೆಲ ಸಣ್ಣ ಪುಟ್ಟ ಅಪರಾಧ ಕೃತ್ಯಗಳಿಗಾಗಿ ಜೈಲು ಸೇರಿದ್ದ ಹಿಂದೂ ಸಮುದಾಯದ ವ್ಯಕ್ತಿಗಳ ಕುಟುಂಬದವರಿಗೆ ನ್ಯಾಯಾಲಯ ವಿಧಿಸಿದ ದಂಡದ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲಿಯೇ ಕೊಳೆಯುವಂತಾಗಿತ್ತು.
ಗಮನಾರ್ಹ ವಿಷಯವೆಂದರೆ, ಒಬ್ಬ ಹಿಂದೂ ಅಪರಾಧಿ ತನ್ನ ಕಾರಾಗೃಹ ವಾಸದ ಶಿಕ್ಷೆಯನ್ನು ಪೂರ್ಣಗೊಳಿಸಿದ್ದ. ಆದರೆ. 1000 ರೂಪಾಯಿಗಳ ದಂಡದ ಮೊತ್ತವನ್ನು ಭರಿಸಲು ಸಾಧ್ಯವಾಗಿರಲಿಲ್ಲ.
ಮುಸ್ಲಿಂ ಸಮುದಾಯದ ಮುಖಂಡರು ಸಭೆ ಸೇರಿ ಜೈಲಿನಲ್ಲಿರುವ 15 ಮಂದಿ ಹಿಂದೂ ಕೈದಿಗಳ ಬಿಡುಗಡೆಗೆ 50 ಸಾವಿರ ರೂಪಾಯಿಗಳ ದೇಣಿಗೆ ಸಂಗ್ರಹಿಸಿ, ಕೈದಿಗಳನ್ನು ಬಿಡುಗಡೆಗೊಳಿಸಿ ಸಾಮರಸ್ಯತೆಯನ್ನು ಮೆರೆದಿದ್ದಾರೆ.