ಚೆನ್ನೈ: ತಮಿಳುನಾಡಿನಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಮಳೆ ಸಂಬಂಧಿತ ಘಟನೆಯಲ್ಲಿ ಸುಮಾರು 176ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಕಳೆದ ಎರಡು ವಾರಗಳಿಂದಲೂ ತಮಿಳುನಾಡಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಇಂದು ಸಹ ತಮಿಳುನಾಡಿನಾದ್ಯಂತ ಮಳೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ಇನ್ನಷ್ಟು ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಗೆ ಕಳೆದೆರಡು ದಿನಗಳಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡು, ಪುದುಚೆರಿ, ಕರ್ನಾಟಕದ ಕರಾವಳಿ ತೀರ ಪ್ರದೇಶ, ಕೇರಳ ಹಾಗೂ ಲಕ್ಷ ದ್ವೀಪ ಮತ್ತಿತರ ಸ್ಥಳಗಲ್ಲಿ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಿರುನವೇಲಿ ಜಿಲ್ಲೆಯ ಪಾಪನಾಶಂನಲ್ಲಿ 10 ಸೆ.ಮೀ ಮಳೆ ಸುರಿದಿದ್ದು, ಚರಣಮಹಾದೇವಿ, ರಾಮೇಶ್ವರಂ, ಕುನೂರ್ ಗಳಲ್ಲಿ 1 ಸೆಂ.ಮೀ. ಮಳೆಯಾಗಿದೆ. ಚೆನ್ನೈನ ಸುತ್ತಮುತ್ತಲಿರುವ ನೆರೆ ಪ್ರದೇಶಗಳಲ್ಲಿ ಇದೀಗ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಮಳೆಯ ಆರ್ಭಟಕ್ಕೆ ಕಳೆದೆರಡು ದಿನಗಳಲ್ಲಿ ಸಾವನ್ನಪ್ಪಿದ 7 ಮಂದಿ ಕುರಿತಂತೆ ಈಗಾಗಲೇ ಸಂತಾಪ ಸೂಚಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸಾವನ್ನಪ್ಪಿದ್ದವರ ಕುಟುಂಬಸ್ಥರಿಗೆ ರು.4 ಲಕ್ಷ ಪರಿಹಾರ ಧನವನ್ನು ಘೋಷಿಸಿದ್ದಾರೆ.