ಬೆಂಗಳೂರು: ‘ಕೇಂದ್ರ ಸರ್ಕಾರದಲ್ಲಿ ಒನ್ ಮ್ಯಾನ್ ಶೋ ನಡೆಯುತ್ತಿದೆ. ಒಬ್ಬ ವ್ಯಕ್ತಿಯೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದರು.
ಇಂದು ಮೌಂಟ್ ಕಾರ್ಮಲ್ ಕಾಲೇಜ್ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಈ ಸಂಸ್ಥೆ ನಿಮಗೆ ಜ್ಞಾನದ ಜೊತೆಗೆ ಸಹಿಷ್ಣುತೆಯನ್ನು ಕಲಿಸಿದೆ. ನೀವು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮೊದಲು ಸುತ್ತಲಿನ ಜನರ ಮಾತು ಕೇಳಿ ಎಂದರು.
ನಿಮಗೆ ಪಾಠ ಮಾಡಲು ನಾನು ಇಲ್ಲಗೆ ಬಂದಿಲ್ಲ. ನೀವು ಏನು ಹೇಳುತ್ತೀರಿ ಅನ್ನುವುದನ್ನು ಕೇಳಲು ಬಂದಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದರು.
ಬಳಿಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಪ್ರಧಾನಿ ಕಚೇರಿಯಿಂದಲೇ ಎಲ್ಲವೂ ಆಗುತ್ತೆ ಎಂದು ಪ್ರಧಾನಿ ನಂಬಿದ್ದಾರೆ. ಒಬ್ಬ ವ್ಯಕ್ತಿ ಇಡೀ ಆಡಳಿತ ನಡೆಸಲು ಹೇಗೆ ಸಾಧ್ಯ? ಒಬ್ಬ ವ್ಯಕ್ತಿಯೇ ಎಲ್ಲದಕ್ಕೂ ಉತ್ತರ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದೇ ವೇಳೆ ಜಿಎಸ್ಟಿ ಮಸೂದೆಯನ್ನು ನಾವು ವಿರೋಧಿಸಿಲ್ಲ. ಈ ಹಿಂದೆ ಮೂರು ವರ್ಷಗಳ ಕಾಲ ಬಿಜೆಪಿಯೇ ನಮ್ಮ ಜಿಎಸ್ಟಿ ಮಸೂದೆಯನ್ನು ವಿರೋಧಿಸಿತ್ತು. ಆದರೆ ಈಗಲೂ ನಾವು ಜಿಎಸ್ಟಿ ಬಗ್ಗೆ ಚರ್ಚೆಗೆ ಸಿದ್ಧವಿದ್ದೇವೆ. ದೇಶಕ್ಕೆ ಲಾಭವಾಗುವ ಜಿಎಸ್ಟಿಯನ್ನು ನಾವು ಬಯಸುತ್ತೇವೆ ಎಂದರು.
ಕೆಲವು ದಿನಗಳ ಹಿಂದೆ 15 ದೊಡ್ಡ ಹೂಡಿಕೆದಾರರನ್ನು ನಾನು ಭೇಟಿ ಮಾಡಿದ್ದೆ. ಈ ವೇಳೆ ಅವರು ಮೋದಿ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ನಿರ್ಧಾರಗಳು ಸರಿಯಿಲ್ಲ ಎಂದು ದೂರಿದರು.