ನವದೆಹಲಿ: ಜಾಗತಿಕ ಉಗ್ರಗಾಮಿ ಸಂಘಟನೆಯಾದ ಆಲ್ ಕೈದಾ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು, ಹೈದ್ರಾಬಾದ್ ನಗರಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಅಲ್ ಕೈದಾ ಉಗ್ರರು ಸಾರ್ವಜನಿಕ ಸ್ಥಳಗಳು, ಪ್ರವಾಸಿ ತಾಣಗಳು, ಪ್ರತಿಷ್ಠಿತ ಕಟ್ಟಡಗಳು ಮತ್ತು ದೇವಾಲಯ ಚರ್ಚ ಮತ್ತು ಮಸೀದಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ರಾಜ್ಯ ಸರಕಾರಗಳು ಪೂರ್ವಭಾವಿಯಾಗಿ ಕಟ್ಟೆಚ್ಚರ ವಹಿಸಬೇಕು ಎಂದು ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮಲೇಷ್ಯಾದ ಕೌಲಾಲುಂಪುರ್ನಲ್ಲಿ ಪ್ರಧಾನಿ ಮೋದಿ, ಭಯೋತ್ಪಾದನೆ ಬಹುದೊಡ್ಡ ಬೆದರಿಕೆಯಾಗಿದ್ದು, ಭಯೋತ್ಪಾದನೆಯನ್ನು ಧರ್ಮದಿಂದ ಬೇರ್ಪಡಿಸುವುದು ಅನಿವಾರ್ಯವಾಗಿದೆ ಎಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದ್ದರು.
ಜಾಗತಿಕವಾಗಿ ಭಯೋತ್ಪಾದನೆ ವಿರೋಧಿ ರಣತಂತ್ರವನ್ನು ಜಾರಿಗೆ ತಂದಲ್ಲಿ, ಭಯೋತ್ಪಾದನೆಗೆ ಯಾವುದೇ ರಾಷ್ಟ್ರ ಬೆಂಬಲ ನೀಡುವಂತಾಗಬಾರದು ಎಂದು ತಿಳಿಸಿದ್ದಾರೆ.
ಪ್ಯಾರಿಸ್, ಅಂಕಾರಾ, ಮಾಲಿ ಮತ್ತು ರಷ್ಯಾದ ವಿಮಾನದ ಮೇಲೆ ನಡೆದ ಉಗ್ರರ ದಾಳಿಗಳು ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಸಂಪೂರ್ಣ ವಿಶ್ವಕ್ಕೆ ಭಯೋತ್ಪಾದನೆ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.