ರಾಯ್ಪುರ್: ಛತ್ತೀಸ್ಗಢದ ಮುಖ್ಯಮಂತ್ರಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಜತೆ ಸೆಲ್ಫೀ ತೆಗೆಸಿಕೊಂಡಿರುವುದು ಈಗ ವಿವಾದಕ್ಕೆ ಗ್ರಾಸವಾಗಿದೆ.
ಶುಕ್ರವಾರ ರಾಯ್ಪುರ್ನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಯುನಿಸೆಫ್, ಶಾಲಾ ವಿದ್ಯಾಭ್ಯಾಸ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ರಮಣ್ ಸಿಂಗ್ ಕರೀನಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾಕೇ.
ಕರೀನಾ ಯುನಿಸೆಫ್ ಇಂಡಿಯಾದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಏತನ್ಮಧ್ಯೆ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದ್ದ ವೇಳೆ ಬಾಲಿವುಡ್ ನಟಿಯೊಂದಿಗೆ ಮುಖ್ಯಮಂತ್ರಿ ಸೆಲ್ಫೀ ಕ್ಲಿಕ್ಕಿಸಿರುವ ಬಗ್ಗೆ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ.
ಬರಗಾಲದಿಂದ ಕಂಗೆಟ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಿರ್ಪ ಅವರ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಮುಖ್ಯಮಂತ್ರಿಗಳು ಸಿನಿಮಾ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭುಪೇಶ್ ಬಗ್ಹೇಲ್ ಹೇಳಿದ್ದಾರೆ.
ಆದಾಗ್ಯೂ, ನಟಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿ, ರಮಣ್ ಸಿಂಗ್ ಏನು ಸಾಧನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕಾರ್ಯಕ್ರಮದಲ್ಲಿ ಅತಿಥಿಗಳೊಂದಿಗೆ ಮಕ್ಕಳೊಂದಿಗೆ ರಮಣ್ ಸಿಂಗ್ ಫೋಟೋ ತೆಗೆಸಿಕೊಂಡಿದ್ದರು. ಅದರಲ್ಲಿ ಇದೂ ಒಂದು ಎಂದು ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಪರವಾಗಿ ಸಮಜಾಯಿಷಿ ನೀಡಿದ್ದಾರೆ.