ಚೆನ್ನೈ: ವಾಯುಭಾರ ಕುಸಿತ ಇದೀಗ ಈಶಾನ್ಯದತ್ತ ಸ್ಥಳಾಂತರಗೊಂಡಿದ್ದು, ಭಾರಿ ಮಳೆಯಿಂದ ತತ್ತರಿಸಿದ್ದ ಚೆನ್ನೈ ಹಾಗೂ ತಮಿಳುನಾಡು ಜನತೆ ನಿಟ್ಟೂಸಿರು ಬಿಡುವಂತಾಗಿದೆ.
ವಾಯು ಭಾರತ ಕುಸಿತದಿಂದಾಗಿ ನಿನ್ನೆ ಒಂದೇ ದಿನದಲ್ಲೇ ಸುಮಾರು 27 ಸೆಂ.ಮೀಟನಷ್ಟು ಮಳೆಯಾಗಿತ್ತು. ಅಲ್ಲದೆ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಅಲೆಗಳು ಏಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇದೀಗ ವಾಯು ಭಾರ ಕುಸಿತ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದು ಆಂಧ್ರಪ್ರದೇಶದತ್ತ ಸ್ಥಳಾಂತರಗೊಳ್ಳುತ್ತಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಹೇಳಿದೆ.
ಭಾರಿ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಬಸ್ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ. ತಗ್ಗುಪ್ರದೇಶದಿಂದ ಸುಮಾರು 10ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ ನೆರೆಯ ಆಂಧ್ರಪ್ರದೇಶ ಕೂಡಾ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ.