ಸಂತ ಕಬೀರ್ ನಗರ್: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಗೆಲುವಿನಿಂದ ಪ್ರಭಾವಿತರಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಉತ್ತರಪ್ರದೇಶದ ಚುನಾವಣೆಯಲ್ಲೂ ಅಂತಹ ಮೈತ್ರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಯಾಗುವ ಸಾಧ್ಯತೆಗಳಿವೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಾದವ್, ರಾಜ್ಯದಲ್ಲಿ ಮಹಾಮೈತ್ರಿಕೂಟ ರಚನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಬಿಹಾರ್ನಂತೆ ಉತ್ತರಪ್ರದೇಶದಲ್ಲೂ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿರಚಿಸಿಕೊಂಡಲ್ಲಿ ಬಿಜೆಪಿಯನ್ನು ಸೋಲಿಸಿ ಸರಕಾರ ರಚಿಸಲು ಸಾಧ್ಯ ಎಂದು ಉತ್ತರಪ್ರದೇಶದ ಸಚಿವ ಕಿದ್ವಾಯಿ ಹೇಳಿಕೆ ನೀಡಿದ ನಂತರ, ಇದೀಗ ಸಿಎಂ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.
ಹಿಂದೆ ಶತ್ರುಗಳಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಮೈತ್ರಿ ರಚಿಸಿಕೊಂಡು ಬಿಹಾರ್ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳಿಪಟಗೊಳಿಸಿದ್ದರು.
ಬಿಹಾರ್ ರಾಜ್ಯದಲ್ಲಿ ಮತದಾರರು ಅಭಿವೃದ್ಧಿ ಪರವಾಗಿ ಮತ ನೀಡಿದ್ದಾರೆ. ಅದರಂತೆ, ಉತ್ತರಪ್ರದೇಶದ ಮತದಾರರು ಪಂಚಾಯಿತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸರಕಾರದ ಅಭಿವೃದ್ಧಿಯ ಪರ ಮತ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.