ನವದೆಹಲಿ: ಬಿಹಾರ್ ಸೋಲಿನ ಪರಾಮರ್ಶೆಗಾಗಿ ಇಂದು ಕರೆದ ಬಿಜೆಪಿ ಸಂಸದೀಯ ಸಭೆಯಲ್ಲಿ, ಪಕ್ಷದ ಸೋಲಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರಣರಲ್ಲ. ನಿತೀಶ್ ನೇತೃತ್ವದಲ್ಲಿ ಮೈತ್ರಿಕೂಟ ರಚಿಸಿರುವುದೇ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಹೇಳಿದೆ.
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ಬಿಹಾರ್ ಜನತೆ ನೀಡಿದ ತೀರ್ಪನ್ನು ಗೌರವಿಸುತ್ತೇವೆ. ಪಕ್ಷದ ಸೋಲಿಗೆ ವಿಪಕ್ಷಗಳ ಮೈತ್ರಿ ರಚಿಸಿಕೊಂಡಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ.
ವಿಪಕ್ಷಗಳಾದ ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಮೈತ್ರಿಕೂಟ ರಚಿಸಿಕೊಂಡಿರುವುದು ಬಿಜೆಪಿ ನೇತೃತ್ವದ ಎನ್ಡಿಎ ಸೋಲಿಗೆ ಕಾರಣವಾಯಿತು. ಮತ ವರ್ಗಾವಣೆ ಎನ್ಡಿಎಗಿಂತ ನಿತೀಶ್ ನೇತೃತ್ವದ ಮೈತ್ರಿಕೂಟದಲ್ಲಿ ಹೆಚ್ಚು ಉತ್ತಮವಾಗಿತ್ತು ಎಂದು ವಿವರಣೆ ನೀಡಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೀಸಲಾತಿ ಪರಿಷ್ಕರಣೆ ಹೇಳಿಕೆ ಎನ್ಡಿಎ ಮೈತ್ರಿಕೂಟದ ಸೋಲಿಗೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.
ಬಿಹಾರ್ ಚುನಾವಣೆ ಸೋಲಿನ ಹೊರತಾಗಿಯೂ ಬಿಹಾರ್ ಸರಕಾರಕ್ಕೆ ಸಾಧ್ಯವಾದ ಎಲ್ಲಾ ನೆರವು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ. ಬಿಹಾರ್ ವಿಧಾನಸಭೆಯಲ್ಲಿ ಸಶಕ್ತ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಪ್ರತಿಯೊಬ್ಬ ನಾಯಕರು ಸಭ್ಯ ಭಾಷೆ ಬಳಸಬೇಕು ಎಂದು ನಾವು ನಿರೀಕ್ಷಿಸುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.