ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಾವೇ ಸ್ವತಃ ಒಂದು ವಿಶ್ವವಿದ್ಯಾಲಯ, ಜ್ಞಾನಸಾಗರ ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ವಿಸಿಟರ್ಸ್ ಕಾನ್ಫರೆನ್ಸ್ನ ಎರಡನೆಯ ದಿನದಂದು ಮಾತನಾಡುತ್ತಿದ್ದ ಪ್ರಧಾನಿ ಮುಖರ್ಜಿಯವರನ್ನು ಬಾಯಿತುಂಬಾ ಹೊಗಳಿದ್ದಾರೆ. ವೈಯಕ್ತಿಕವಾಗಿ ತಾವು ರಾಷ್ಟ್ರಪತಿಯವರಿಂದ ಅಪಾರ ಜ್ಞಾನ ಲಾಭ ಪಡೆದಿರುವುದಾಗಿ ಮತ್ತು ಸೂಕ್ಷ್ಮ ವಿಷಯವನ್ನು ಕ್ಷಣ ಮಾತ್ರದಲ್ಲಿ ತನಗೆ ಅವರು ಅರ್ಥ ಮಾಡಿಸಿದ್ದಾರೆ ಎಂದು ವರ್ಣಿಸಿದ್ದಾರೆ.
ಅವರು ಜ್ಞಾನ ಭಂಡಾರ. ನಾನು ಅವರನ್ನು ಭೇಟಿಯಾದಾಗಲೆಲ್ಲ ತಮ್ಮ ವೈಯಕ್ತಿಕ ಅನುಭವದೊಂದಿದೆ ಕ್ಷಣ ಮಾತ್ರದಲ್ಲಿ ಎಲ್ಲವನ್ನು ವಿವರಿಸಿ ಬಿಡುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ
“ನಮ್ಮ ರಾಷ್ಟ್ರಪತಿ ತಮ್ಮಲ್ಲೇ ವಿಶ್ವವಿದ್ಯಾಲಯವನ್ನಿಟ್ಟಿಕೊಂಡಿದ್ದಾರೆ. ಅವರು ಜ್ಞಾನಸಾಗರ. ನೀವು ಪ್ರಧಾನಿಯಾಗಿ ಪಡೆದ ಬಹುದೊಡ್ಡ ಪ್ರಯೋಜನ ಏನೆಂದು ಯಾರಾದರೂ ಕೇಳಿದರೆ, ನಾನು ಪ್ರಣವ್ ಅವರಿಗೆ ಹತ್ತಿರವಾಗಲು ಅವಕಾಶ ಸಿಕ್ಕಿದ್ದೇ ನಾನು ಪ್ರಧಾನಿಯಾಗಿ ಪಡೆದ ದೊಡ್ಡ ಲಾಭ ಎನ್ನುತ್ತೇನೆ”, ಎಂದು ಅವರು ಪ್ರಣವ್ ಬಗೆಗೆ ತಾವು ಹೊಂದಿರುವ ಅಪಾರ ಗೌರವವನ್ನು ಹೊರ ಹಾಕಿದ್ದಾರೆ.