ಪಾಟ್ನಾ, ಅ.25: ಉತ್ತರಪ್ರದೇಶದ ನಂತರ ಇದೀಗ ಬಿಹಾರದಲ್ಲಿ ದುಷ್ಕರ್ಮಿಗಳ ಪತ್ರಕರ್ತನ ಮೇಲೆ ಗುಂಡಿನ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದು, ದೈನಿಕ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನೊಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಗಯಾ ದಲ್ಲಿ ನಿನ್ನೆ ನಡೆದಿದೆ.
ದೈನಿಕ ಜಾಗರಣ್ ಪತ್ರಿಕೆಯೊಂದರಲ್ಲಿ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಮಿಥಿಲೇಶ್ ಕುಮಾರ್ ಪಾಂಡೆ(40) ಹತ್ಯೆಯಾದ ಪತ್ರಕರ್ತನಾಗಿದ್ದು, . ನಿನ್ನೆ ಸಂಜೆ ಕೆಲಸ ಮುಗಿಸಿ 7ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಮಿಥಿಲೇಶ್ ಮನೆಗೆ ಬರುವುದನ್ನೇ ಕಾದು ಕುಳಿತಿದ್ದ ಮೂವರು ದುಷ್ಕರ್ಮಿಗಳು ಮಿಥಿಲೇಶ್ ಮನೆಯೊಳಗೆ ಹೋಗುತ್ತಿದ್ದಂತೆ ಮನೆಗೆ ನುಗ್ಗಿದ್ದಾರೆ. ನಂತರ ಪಿಸ್ತೂಲಿನಿಂದ ಎರಡು ಬಾರಿ ಮಿಥಿಲೇಶ್ ಮೇಲೆ ಏಕಾಏಕಿ ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಗಯಾ ಎಸ್ಎಸ್ಪಿ ಮನು ಮಾಹಾರಾಜ್ ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿಥಿಲೇಶ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರದರೂ ಅಷ್ಟರಲ್ಲಾಗಲೇ ಮಿಥಿಲೇಶ್ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಮೃತ ಪತ್ರಕರ್ತ ಮಿಥಿಲೇಶ್ ಅವರು ವಿವಾಹಿತರಾಗಿದ್ದು, ಪತ್ನಿ ಜ್ಯೋತಿ ದೇವಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆಂದು ತಿಳಿದುಬಂದಿದೆ. ಘಟನೆಗೆ ಪ್ರಮುಖ ಕಾರಣ ಈ ವರೆಗೂ ತಿಳಿದುಬಂದಿಲ್ಲ. ಅಲ್ಲದೇ ಈ ಹಿಂದೆ ಅನೇಕ ಬಾರಿ ಬೆದರಿಕೆ ಕರೆಗಳು ಬಂದ ಬಗ್ಗೆ ಪೋಲಿಸರಿಗೂ ಮಿಥಿಲೇಶ್ ಅವರು ದೂರು ದಾಖಲಿಸಿದ್ದರು.ದೇಶದಲ್ಲಿ ಪರ್ತಕರ್ತರು ರಕ್ಷಣೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಉತ್ತರಪ್ರದೇಶದಲ್ಲಿ ನಡೆದ ಪರ್ತಕರ್ತನ ಹತ್ಯೆ ಮಾಸುವ ಮುನ್ನವೇ ಬಿಹಾರದಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
