ಪಾಟ್ನಾ: ಪ್ರಧಾನಿ ಮೋದಿಯವರ ಡಿಎನ್ಎ ಟೀಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನಾನು 10 ವರ್ಷ ಎನ್ಡಿಎ ಮುಖ್ಯಮಂತ್ರಿಯಾಗಿದ್ದಾಗ ನನ್ನ ಡಿಎನ್ಎದಲ್ಲಿ ಯಾವ ಲೋಪಗಳಿರಲಿಲ್ಲವೇ?’, ಎಂದು ಪ್ರಶ್ನಿಸಿದ್ದಾರೆ.
ಮುಝಪ್ಪರ್ನಗರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,’ಪ್ರಧಾನಿ ಮೋದಿ ಡಿಎನ್ಎ ಬಗ್ಗೆ ಮಾತನಾಡಲು ಇಲ್ಲಿ ಬಂದಿದ್ದರು. ನನ್ನ ಡಿಎನ್ಎದಲ್ಲಿ ದೋಷವಿದ್ದರೆ ಹೇಗೆ 10 ವರ್ಷ ನನ್ನನ್ನೇ ಎನ್ಡಿಎ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು’, ಎಂದು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ಫರಿದಾಬಾದ್ನಲ್ಲಿ ದಲಿತರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹರಿಯಾಣಾದ ಜನರು ಬಿಜೆಪಿಗೆ ಮತ ನೀಡಿದರು. ಈಗ ಬಿಜೆಪಿ ಆಳ್ವಿಕೆಯಡಿಯಲ್ಲಿ ದಲಿತರನ್ನು ಜೀವಂತ ಸುಡಲಾಗುತ್ತದೆ’, ಎಂದು ಗುಡುಗಿದರು.
ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ಕಿಡಿಕಾರಿದ ಅವರು, ಈ ಹೇಳಿಕೆಗಳು ದಲಿತರ ಬಗೆಗೆ ದಲಿತರ ಬಗೆಗೆ ಅವರ ಮನೋಸ್ಥಿತಿಯನ್ನು ತೋರ್ಪಡಿಸುತ್ತದೆ. ಬಿಹಾರದಲ್ಲಿ ಜಂಗಲ್ ರಾಜ್ ಇದೆ ಎಂದು ಟೀಕಿಸುತ್ತಾರೆ, ಹರಿಯಾಣಾದಲ್ಲೇನು ಮಂಗಲ್ ರಾಜ್ ಇದೆಯೇ ಎಂದು ವ್ಯಂಗ್ಯವಾಡಿದ್ದಾರೆ.