ರಾಷ್ಟ್ರೀಯ

ಮೋದಿ ಸರ್ಕಾರವನ್ನು ವಜಾ ಮಾಡಿ: ರಾಷ್ಟ್ರಪತಿಗೆ ಅಜಂ ಖಾನ್ ಆಗ್ರಹ

Pinterest LinkedIn Tumblr

Azam-Khanಲಕನೌ: “ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವುದರಲ್ಲಿ ವಿಫಲವಾಗಿರುವುದಕ್ಕೆ” ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ಸೃಷ್ಟಿಸಿರುವುದಕ್ಕೆ ನರೇಂದ್ರ ಮೋದಿ ಆಡಳಿತದ ಸರ್ಕಾರವನ್ನು ವಜಾ ಮಾಡಬೇಕೆಂದು ಉತ್ತರ ಪ್ರದೇಶದ ಸಚಿವ ಅಜಂ ಖಾನ್ ರಾಷ್ಟ್ರಪತಿಯವರಿಗೆ ಆಗ್ರಹಿಸಿದ್ದಾರೆ.

ಭಾರತವನ್ನು ‘ಹಿಂದೂ ರಾಷ್ಟ್ರವನ್ನಾಗಿ’ ಪರಿವರ್ತಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಪಣ ತೊಟ್ಟಿದೆ ಎಂದು ದೂರಿರುವ ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅಜಂ ಖಾನ್ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಹೆಚ್ಚು ತಡ ಮಾಡದೆ ಕೇಂದ್ರ ಸರ್ಕಾರವನ್ನು ವಜಾ ಮಾಡಬೇಕೆಂದು ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ಭಾನುವಾರ ಆಗ್ರಹಿಸಿದ್ದಾರೆ.

ದಾಧ್ರಿ ದುರ್ಘಟನೆಯ ವಿಷಯವನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ಯುವುದಾಗಿ ಈ ಸಚಿವರು ಇತ್ತೀಚೆಗಷ್ಟೇ ಹೇಳಿಕೆ ನಿಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ ಉತ್ತರಪ್ರದೇಶದ ಅಧ್ಯಕ್ಷ ಲಕ್ಷ್ಮಿಕಾಂತ್ ವಾಜಪೇಯಿ, ಮೊದಲು ವಿಶ್ವಸಂಸ್ಥೆಗೆ ಹೋಗುತ್ತೇನೆ ಎಂದಿದ್ದರು, ಈಗ ರಾಷ್ಟ್ರಪತಿಗೆ ಇಳಿಸಿದ್ದಾರೆ ಎಂದು ಕುಹಕವಾಡಿ, ಸರ್ಕಾರವನ್ನು ವಜಾ ಮಾಡಿ ಎಂದು ಕೇಳಿರುವುದು ನಗೆಪಾಟಲಿನ ವಿಷಯ ಎಂದಿದ್ದಾರೆ.

“ರಾಷ್ಟ್ರಪತಿಗಳಿಂದ ಕೇಂದ್ರ ಸರ್ಕಾರ ವಜಾಗೊಂಡ ಉದಾಹರಣೆ ಇತಿಹಾಸದಲ್ಲಿ ಇಲ್ಲಿಯವರೆಗೂ ಇಲ್ಲ, ಆದರೆ ರಾಜ್ಯ ಸರ್ಕಾರವನ್ನು ವಜಾಗೊಳಿಸಿರುವ ಅಸಂಖ್ಯಾತ ಉದಾಹರಣೆಗಳಿವೆ. ಬಹುಷಃ ಸುತ್ತಿ ಬಳಸಿ ಅಜಂ ಖಾನ್, ಅಖಿಲೇಶ್ ಯಾದವ್ ಅವರ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕೇಳಿರಬೇಕು” ಎಂದು ವಾಜಪೇಯಿ ಹೇಳಿದ್ದಾರೆ.

“ಒಂದು ಪಕ್ಷ ಅಜಂ ಖಾನ್ ರಾಜ್ಯ ಸರ್ಕಾರದ ವಜಾವನ್ನು ಬಯಸಿದ್ದಾರೆ ನಾನು ಕೂಡ ಅದಕ್ಕೆ ಬೆಂಬಲಿಸುತ್ತೇನೆ. ಏಕೆಂದರೆ ಸಮಾಜವಾದಿ ಪಕ್ಷದ ಆಡಳಿತದಡಿ ಮುಸ್ಲಿಮರನ್ನು ಒಳಗೊಂಡಂತೆ ಎಲ್ಲ ವರ್ಗದ ಜನರ ಸುರಕ್ಷತೆಯನ್ನು ಕಡೆಗಣಿಸಲಾಗಿದೆ” ಎಂದು ವಾಜಪೇಯಿ ಹೇಳಿದ್ದಾರೆ.

Write A Comment