ಬಂಕಾ(ಬಿಹಾರ್): ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ದುರಹಂಕಾರಿ ವ್ಯಕ್ತಿಯಾಗಿದ್ದಾರೆ, ಅಂತಹ ವ್ಯಕ್ತಿಗೆ ಮತ ಹಾಕುವುದು ವ್ಯರ್ಥವಾದಂತೆ. ಆದ್ದರಿಂದ, ಬಿಹಾರ್ ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಬಿಜೆಪಿ ಮೈತ್ರಿಕೂಟಕ್ಕೆ ಮತ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರನ್ನು ಕೋರಿದ್ದಾರೆ
ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಮೋದಿ, ಉದ್ಯೋಗಕ್ಕಾಗಿ ಯುವಕರು ವಲಸೆ ಹೋಗುತ್ತಿರುವ ಸಮಸ್ಯೆ, ಬಡವರ ಸಮಸ್ಯೆಗಳು ರಾಜ್ಯದ ಅಭಿವೃದ್ಧಿಯಲ್ಲಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.
ಬಿಹಾರ್ ರಾಜ್ಯಕ್ಕೆ 1.65 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿರೋಧಿಗಳ ವಿರುದ್ಧವು ಮೋದಿ ವಾಗ್ದಾಳಿ ನಡೆಸಿದರು.
ಕೆಲ ನಾಯಕರು ಕೇಂದ್ರ ಸರಕಾರ ಘೋಷಿಸಿದ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಬರುತ್ತದೆಯೇ ಅಥವಾ ಇಲ್ಲವೋ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರದಿಂದ ಒಂದು ರೂಪಾಯಿಯಾದರೂ ಬಂದಿದೆಯೇ ಎಂದು ತಿರುಗೇಟು ನೀಡಿದರು.
ಒಂದು ವೇಳೆ, ನಾನು ಕೇಂದ್ರ ಸರಕಾರದಿಂದ 1.65 ಲಕ್ಷ ರೂಪಾಯಿಗಳ ಹಣವನ್ನು ಬಿಡುಗಡೆಗೊಳಿಸಿದರೂ ಅಹಂಕಾರಿ ಸಿಎಂ ನಿತೀಶ್ ಕುಮಾರ್, ಮೋದಿ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅದನ್ನು ಕೇಂದ್ರ ಸರಕಾರಕ್ಕೆ ಮರಳಿಸುತ್ತಾರೆ. ಅವರ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.