ದಾದ್ರಿ: ಗೋ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆ ಹಿನ್ನೆಲೆ ಹತ್ಯೆಗೀಡಾಗಿದ್ದ ಮೊಹಮ್ಮದ್ ಅಕ್ಲಾಖ್ ಮನೆಗೆ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಘಟನೆ ಸಂಬಂಧ ಇಂದು ಮೃತನ ಕುಟುಂಬವನ್ನು ಭೇಟಿ ಮಾಡಲು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಾದ್ರಿಗೆ ಭೇಟಿ ನೀಡಲು ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಅವರನ್ನು ತಡೆ ಹಿಡಿದಿದ್ದರು.
ದಾದ್ರಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ನಮ್ಮನ್ನು ತಡೆದರು. ಇದು ಯಾವ ಕಾರಣಕ್ಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ನಿನ್ನೆಯಷ್ಟೇ ಮಹೇಶ್ ಶರ್ಮಾ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾರೊಬ್ಬರೂ ಅವರನ್ನು ತಡೆಯಲಿಲ್ಲ. ಆದರೆ, ನಮ್ಮನ್ನೇಕೆ ತಡೆದರು ಎಂದು ಪ್ರಶ್ನಿಸಿದ್ದಾರೆ. ನಾವು ಶಾಂತಿ ಹಾಗೂ ಪ್ರೀತಿಯನ್ನು ಬಯಸುವವರಾಗಿದ್ದು, ನಾನು ಮೃತ ವ್ಯಕ್ತಿ ಇಕ್ಲಾಕ್ ನ ಕುಟುಂಬವನ್ನು ಭೇಟಿ ಮಾಡಬೇಕು ಎಂದು ಹೇಳಿಕೊಂಡಿದ್ದರು