ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಏಕೆ ಜಾರಿ ಮಾಡಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ(ಇಡಿ)ಕ್ಕೆ ಇಂಟರ್ಪೊಲ್ ಪ್ರಶ್ಮಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಡಿ ಮನವಿ ಮಾಡಿತ್ತು. ಆದರೆ ರೆಡ್ ಕಾರ್ನರ್ ನೋಟಿಸ್ ಏಕೆ ಜಾರಿ ಮಾಡಬೇಕು ಎಂಬುದರ ಬಗ್ಗೆ ವಿವರಣೆ ನೀಡುವಂತೆ ಆಗಸ್ಟ್ 20ರಂದು ಇಡಿಗೆ ಇಂಟರ್ಪೊಲ್ ಕೇಳಿಕೊಂಡಿದೆ ಎಂದು ವರದಿ ಮಾಡಲಾಗಿದೆ. ಅಲ್ಲದೆ ಮೋದಿ ವಿರುದ್ಧ ಲಭ್ಯವಿರುವ ಸಾಕ್ಷಾಧಾರಗಳನ್ನು ಒದಗಿಸುವಂತೆ ಇಡಿಗೆ ಸೂಚಿಸಲಾಗಿದೆ.
ಲಲಿತ್ ಮೋದಿ ವಿರುದ್ಧ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಬೇಕೆಂದು ಜಾರಿ ನಿರ್ದೇಶನಲಾಯದ ಮುಂಬಯಿ ಘಟಕ ಸಿಬಿಐಗೆ ಮನವಿ ಮಾಡಿತ್ತು.