ಲಾತೂರ್: ಮಹಾರಾಷ್ಟ್ರದ ಮರಾಠಾವಾಡ ಜಿಲ್ಲೆಯ ಲಾತೂರ್ ಮತ್ತು ಒಸ್ಮನಾಬಾದ್ಪ್ರದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 113 ರೈತರ ಕುಟುಂಬಗಳಿಗೆ ಬಾಲಿವುಡ್ ನಟರಾದ ನಾನಾ ಪಾಟೇಕರ್ ಮತ್ತು ಮಾರ್ಕಂಡ್ ಅಸಾನ್ಪುರೆ ಸಹಾಯಧನ ನೀಡಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ನಟರು ಪ್ರತೀ ಕುಟುಂಬಕ್ಕೆ 15,000 ರು.ಗಳ ಚೆಕ್ನ್ನು ನೀಡಿದ್ದಾರೆ.
ಚೆಕ್ ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಾನಾ ಪಾಟೇಕರ್, ಇಲ್ಲಿನ ಬರಗಾಲ ನನ್ನನ್ನು ಕಂಗೆಡಿಸುತ್ತಿದೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನೇತಾರ ನಾರಾಯಣ್ ರಾಣೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫೆಡ್ನವಿಸ್ ಈ ಬರಗಾಲದ ವಿರುದ್ಧ ಹೋರಾಡಲು ಮುಂದೆ ಬರಬೇಕು ಎಂದಿದ್ದಾರೆ.
ಬರಗಾಲವೆಂಬುದು ಪ್ರಕೃತಿ ವಿಕೋಪ. ಆ ನಾಯಕರೆಲ್ಲರೂ ಒಟ್ಟಾಗಿ ಬರುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಎಲ್ಲರೂ ಒಟ್ಟಾಗಿ ಬರಬೇಕು ಎಂಬುದು ನನ್ನ ಆಸೆ. ಬರದ ತೀವ್ರತೆ ಎಷ್ಟಿದೆ ಎಂದರೆ ಅದನ್ನು ನಿವಾರಿಸಲು ಒಂದು ಪಕ್ಷದಿಂದ ಸಾಧ್ಯವಿಲ್ಲ. ಹಲವಾರು ಜನರು ಅವರವರ ಸಾಮರ್ಥ್ಯಕ್ಕನುಗುಣವಾಗಿ ರೈತರಿಗೆ ಸಹಾಯ ಮಾಡಿದ್ದಾರೆ. ನಾವು ಕೇವಲ ಪೋಸ್ಟ್ಮ್ಯಾನ್ಗಳಷ್ಟೇ ಎಂದು 64 ರ ಹರೆಯದ ನಾನಾ ಹೇಳಿದ್ದಾರೆ.
ಪಾಟೇಕರ್ ಮತ್ತು ಅಸಾನ್ಪುರೆ ಇಬ್ಬರೂ ಮರಾಠಿ ಚಿತ್ರಗಳಲ್ಲಿನ ಖ್ಯಾತ ನಟರಾಗಿದ್ದಾರೆ.
ಆಗಸ್ಟ್ 10ರಂದು ಇವರಿಬ್ಬರೂ ವಿದರ್ಭ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ 62 ರೈತರ ಕುಟುಂಬಗಳಿಗೆ ತಲಾ 15,000 ಧನ ಸಹಾಯ ನೀಡಿದ್ದರು.