ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್(ಒಆರ್ ಒಪಿ) ಜಾರಿಗೆ ಆಗ್ರಹಿಸಿ ಆಮರಣಾಂತ ಉಪವಾಸ ನಡೆಸುತ್ತಿರುವ ನಿವೃತ್ತ ಯೋಧ ಕರ್ನಲ್ ಪುಷ್ಪೇಂದರ್ ಸಿಂಗ್ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತತ ಎಂಟನೇ ದಿನ ಉಪವಾಸ ಪ್ರತಿಭಟನೆ ನಡೆಸಿದ್ದ ಪುಷ್ಪೇಂದರ್ ಸಿಂಗ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅಸ್ವಸ್ಥಗೊಂದ ಮಾಜಿ ಯೋಧರನ್ನು ದಕ್ಷಿಣ ದೆಹಲಿಯ ರಾಕ್ ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಭಟನಾ ನಿರತ ಮಾಜಿ ಸೈನಿಕರ ಸಂಘದ ವಕ್ತಾರ ಅನಿಲ್ ಕೌಲ್ ತಿಳಿಸಿದ್ದಾರೆ.
ಆಮರಣಾಂತ ಉಪವಾಸ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಪುಷ್ಪೇಂದರ್ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈಗ ನಿವೃತ್ತ ಯೋಧ ಹವಾಲ್ದಾರ್ ತೇಜ್ ನೇತೃತ್ವ ವಹಿಸಿದ್ದಾರೆ. ಆಮರಣಾಂತ ಉಪವಾಸ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮೇಜರ್ ಸಿಂಗ್ ಮತ್ತು ಅಶೋಕ್ ಕುಮಾರ್ ಚೌಹಾಣ್ ಆರೋಗ್ಯದ ಬಗ್ಗೆ ಆತಂಕ ಇಲ್ಲ ಎಂದು ಅನಿಲ್ ಕೌಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.