ನಾಸಿಕ್: ನೆನ್ನೆ ಮುಂಬೈ ಅಂಗಡಿಯೊಂದರಿಂದ ೭೦೦ ಕೆಜಿ ಈರುಳ್ಳಿ ಕಳವಾದ ಬಳಿಕ ಈಗ ನಾಸಿಕ್ ರೈತನ ದಾಸ್ತಾನಿನಿಂದ ಒಳ್ಳೆಯ ಗುಣಮಟ್ಟದ ೨೦೦೦ ಕೆಜಿ ಈರುಳ್ಳಿ ಕಳವಾದ ಘಟನೆ ವರದಿಯಾಗಿದೆ.
ನಂದಗಾವ್ ತಾಲೂಕಿನ ಪೀಪರ್ಖೇಡ್ ಗ್ರಾಮದ ರೈತ ಅಬಾಸಾಹೇಬ್ ಪವಾರ್ ಅವರು ನೆನ್ನೆ ತಮ್ಮ ದಾಸ್ತಾನಿನಲ್ಲಿದ್ದ ೨೦ ಕ್ವಿಂಟಾಲ್ ಈರುಳ್ಳಿ ಕಳವಾಗಿರುವುದಕ್ಕೆ ನಂದಗಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏಷ್ಯಾದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಸಾಲ್ಗಾವ್ ನಲ್ಲಿ ಈ ಮಧ್ಯ ಈರುಳ್ಳಿ ಬೆಲೆಯ ಸಗಟು ದರ ಕೆಜಿಗೆ ೫೭ ರೂ ವರೆಗೂ ಏರಿದೆ. ದೆಹಲಿ ಮತ್ತು ಇನ್ನಿತರ ನಗರ ಪ್ರದೇಶಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ೮೦ ರೂ ಮೀರಿದ್ದು, ಗ್ರಾಹಕರಲ್ಲಿ ಕಣ್ಣೀರು ಹೆಚ್ಚಿಸಿದೆ.
ಸರ್ಕಾರ ತೆಗೆದುಕೊಂಡಿರುವ ಹಲವಾರು ಕ್ರಮಗಳ ಹೊರತಾಗಿಯೂ ಕಳೆದ ಕೆಲವು ವಾರಗಳಿಂದ ಈರುಳ್ಳಿ ಪೂರೈಕೆ ಕ್ಷೀಣಿಸುತ್ತ ಹೋಗಿದ್ದು ಬೆಲೆ ಹೆಚ್ಚುತ್ತಲೇ ಇರುವುದು ಸರ್ಕಾರ ಮತ್ತು ಜನಗಳಲ್ಲಿ ಆತಂಕ ಮೂಡಿಸಿದೆ.