ಹೊಸದಿಲ್ಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿದ್ದ ಪ್ರಶಂಸನಾ ಪತ್ರದಲ್ಲಿನ ಅಕ್ಷರಗಳ ದೋಷ ಸಚಿವೆ ಸ್ಮೃತಿ ಇರಾನಿ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕಂಡಿರುವ ಸಚಿವೆ ಇರಾನಿ, ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.
ತಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರತಿಪಕ್ಷಗಳಿಂದ ಸದಾ ಕೊಂಕು ಮಾತು ಎದುರಿಸುತ್ತಿರುವ ಸಚಿವೆ ಇರಾನಿ, ಈಗ ತಮ್ಮ ಸಚಿವಾಲಯದ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ.
ಏನಿದು ಪ್ರಕರಣ? ಕೇಂದ್ರೀಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಡಿ ಬರುವ ಶಿಕ್ಷಣ ಇಲಾಖೆ ಬರೆದ ಪ್ರಶಂಸನಾ ಪತ್ರ ಸಾಕಷ್ಟು ಅಕ್ಷರ ದೋಷದಿಂದ ಕೂಡಿತ್ತು. ಸಚಿವರಿಗೆ ಮಾರೋಲೆ ಬರೆದ ದಿಲ್ಲಿ ಪಬ್ಲಿಕ್ ಸ್ಕೂಲ್ನ ಭಾಷಾ ಅಧ್ಯಾಪಕ ರಿಚಾ ಕುಮಾರ್, ”ನಿಮ್ಮ ಪತ್ರ ಸಂತಸ ತಂದಿದೆ. ಆದರೆ, ಒಬ್ಬ ಭಾಷಾ ಅಧ್ಯಾಪಕನಾಗಿ ಅದರಲ್ಲಿರುವ ಕಾಗುಣಿತ ದೋಷವನ್ನು ನಿಮ್ಮ ಗಮನಕ್ಕೆ ತರದೇ ನನ್ನಿಂದ ಇರಲಾಗದು,” ಎಂದು ತಿಳಿಸಿದ್ದರು. ದೋಷಪೂರಿತ ಪತ್ರದ ಚಿತ್ರವನ್ನೂ ಸಚಿವರಿಗೆ ರವಾನಿಸಿದ್ದರು.
ಪತ್ರದಲ್ಲಿ ಆಂಗ್ಲಭಾಷೆಯಲ್ಲಿ ಬರೆಯಲಾಗಿರುವ ಐಘೆಐಖಉ್ಕ ಪದದ ಬದಲಿಗೆ ಐಘೆಖಉ್ಕ ಎಂದು ಮುದ್ರಣವಾಗಿದ್ದು, ಹಿಂದಿಯಲ್ಲಿ ಬರೆದಿರುವ ಅಕ್ಷರಗಳಲ್ಲೂ ತಪ್ಪಿದೆ. ಪತ್ರದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ಇದು ಕಣ್ತಪ್ಪಿನಿಂದಾಗಿದ್ದು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ಕೂಡ ನೀಡಿದ್ದಾರೆ.