ನಾಗಾ ಬಂಡುಕೋರ ಗುಂಪುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ಒಪ್ಪಂದ ಮಾಡಿಕೊಂಡಿರುವುದಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಶ್ಲಾಘಿಸಿದ್ದು ಇದೊಂದು ಮಹತ್ವದ ಸಾಧನೆ ಎಂದು ವರ್ಣಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವಂತೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಒಳ್ಳೆಯ ಹಾಗೂ ದಿಟ್ಟ ನಿರ್ಧಾರವಾಗಿದೆ. ತಾವು ಪ್ರಧಾನಿ ಆಗಿದ್ದಾಗ ನಾಗಾ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಸಂಧಾನಕ್ಕೆ ಚಾಲನೆ ಕೊಟ್ಟಿದ್ದನ್ನು ಸ್ಮರಿಸಿಕೊಂಡ ಅವರು, ಇದಕ್ಕಾಗಿ ತಾವು ಸ್ವಿಟ್ಜೆರ್ಲೆಂಡ್ ಗೆ ತೆರಳಿ, ನಾಗಾ ಬಂಡುಕೋರ ಗುಂಪುಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದು ಅಂದು ತಾವು ತೆಗೆದುಕೊಂಡಿದ್ದ ಕ್ರಮವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರೆಸಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ತಿಳಿಸಿದರು.
ಈ ಒಪ್ಪಂದಕ್ಕೆ ಸಹಿ ಹಾಕಿ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದು ಅವರ ಈ ಸಾಧನೆಗೆ ತಾವು ಅವರನ್ನು ಅಭಿನಂದಿಸಿದ್ದೇನೆ ಎಂದು ತಿಳಿಸಿದರು.