ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ರಾಮೇಶ್ವರಂ ನಲ್ಲಿ ನಾಳೆ ನಡೆಯಲಿದ್ದು, ಇಂದು ಅಂತಿಮ ದರ್ಶನ ಪಡೆಯಲು ರಾಮೇಶ್ವರಂ ಗೆ ಜನಸಾಗರವೇ ಹರಿದು ಬರುತ್ತಿದೆ.
ನವದೆಹಲಿಯಿಂದ ರಾಮೇಶ್ವರಂಗೆ ಕಲಾಂ ಅವರ ಪಾರ್ಥಿವ ಶರೀರ ಬಂದ ಬಳಿಕ ರಾತ್ರಿಯವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲು ಜಿಲ್ಲಾಡಳಿತ ಸಕಲ ಸಿದ್ದತೆಯನ್ನೂ ಕೈಗೊಂಡಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುವ ಕಾರಣ ದರ್ಶನ ಮಾಡಲು ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಉರಿ ಬಿಸಿಲಿನಲ್ಲೂ ಜನತೆ ಕಾದು ಕುಳಿತಿದ್ದಾರೆ.
ರಾಮೇಶ್ವರಂನ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದು, ಸಾರ್ವಜನಿಕರು ಕಲಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಮೈದಾನದತ್ತ ಸಾಗುತ್ತಿದ್ದಾರೆ. ಅಬ್ದುಲ್ ಕಲಾಂ ಅವರಿಗೆ ಅಚ್ಚು ಮೆಚ್ಚಾಗಿದ್ದ ವಿದ್ಯಾರ್ಥಿಗಳೂ ಸಹ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಮೇಶ್ವರಂ ಗೆ ಆಗಮಿಸಿದ್ದಾರೆ. ಕಲಾಂ ಅವರ ಗೌರಾವಾರ್ಥ ನಾಳೆ ತಮಿಳುನಾಡಿನಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಚಲನಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.