ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡು ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗಿದ್ದರೆ ಪಾಕಿಸ್ತಾನದ ವಿಜ್ಞಾನಿಯೊಬ್ಬ ಅವರ ಕುರಿತು ಆಡಿರುವ ಮಾತು ಈಗ ಅಕ್ರೋಶವನ್ನು ಹುಟ್ಟು ಹಾಕಿದೆ.
ಪಾಕಿಸ್ತಾನದ ವಿಜ್ಞಾನಿ ಎ.ಕ್ಯು. ಖಾನ್, ಅಣ್ವಸ್ತ್ರ ಕುರಿತ ಮಾಹಿತಿಯನ್ನು ವಿದೇಶಕ್ಕೆ ಮಾರಿಕೊಂಡಿದ್ದ ಆರೋಪದ ಮೇಲೆ ಈ ಹಿಂದೆ ಬಂಧನಕ್ಕೊಳಗಾಗಿದ್ದು, ಇಂತಹ ಹಿನ್ನೆಲೆಯುಳ್ಳ ಈ ವಿಜ್ಞಾನಿ, ಅಬ್ದುಲ್ ಕಲಾಂ ಒಬ್ಬ ಸಾಧಾರಣ ವಿಜ್ಞಾನಿ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಅಲ್ಲದೇ ವಿಜ್ಞಾನ ಕ್ಷೇತ್ರದಲ್ಲಿ ಕಲಾಂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲವೆಂದಿರುವ ಆತ, ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮುಸ್ಲಿಮರ ಮತ ಗಳಿಕೆ ಸಲುವಾಗಿ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿತ್ತು ಎಂಬ ಮಾತುಗಳನ್ನಾಡಿದ್ದಾರೆ. ಅಬ್ದುಲ್ ಖಾದರ್ ಖಾನ್ (ಎ.ಕ್ಯು. ಖಾನ್) ಮಾತುಗಳಿಗೆ ಭಾರತದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.
ತಮ್ಮ ಸರಳ ನಡೆ, ನುಡಿಗಳಿಂದಲೇ ಜನ ಸಾಮಾನ್ಯರ ರಾಷ್ಟ್ರಪತಿಗಳೆನಿಸಿಕೊಂಡಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ವಿಜ್ಞಾನ ಕ್ಷೇತ್ರದಲ್ಲಿನ ತಮ್ಮ ಸಾಧನೆಗಾಗಿ ‘ಮಿಸೈಲ್ ಮ್ಯಾನ್’ ಎಂದು ಕರೆಸಿಕೊಂಡಿದ್ದರು. ಅಲ್ಲದೇ ತಮ್ಮ ಜೀವಿತದ ಕಡೆ ಗಳಿಗೆಯವರೆಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಎಲ್ಲರ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದರು.