ಹೊಸದಿಲ್ಲಿ: ಲಲಿತ್ ಗೇಟ್ ಹಾಗೂ ವ್ಯಾಪಂ ಹಗರಣಗಳೊಂದಿಗೆ ಹೆಸರು ತಗುಲಿ ಹಾಕಿಕೊಂಡವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳ ಪಟ್ಟು, ನಿಲುವು ಸಡಿಲಿಸದ ಆಡಳಿತ ಪಕ್ಷದ ಬಿಗಿಪಟ್ಟಿನಿಂದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ವಾರದ ಕಲಾಪಗಳು ವ್ಯರ್ಥವಾಗಿದೆ. ಆ ಮೂಲಕ ಜನರ ತೆರಿಗೆ ಹಣ 260 ಕೋಟಿ ರೂ. ಪೋಲಾದಂತಾಗಿದೆ.
ಸಂಸತ್ತಿನ ಶೇ.91ರಷ್ಟು ಕಾರ್ಯಸೂಚಿಗಳು ನಿಗದಿತ ಸಮಯಕ್ಕೆ ಚರ್ಚೆಗೆ ಬಂದಿಲ್ಲ. ಪ್ರತಿ ಗಂಟೆ ಕಲಾಪಕ್ಕೆ ಲೋಕಸಭೆಯಲ್ಲಿ 1.5 ಕೋಟಿ, ರಾಜ್ಯಸಭೆಯಲ್ಲಿ 1.1 ಕೋಟಿ ತಗುಲುತ್ತಿದ್ದು, ಲೋಕಸಭೆಯಲ್ಲಿ ಒಟ್ಟು ಸುಮಾರು 162 ಕೋಟಿ ರೂ. ಹಾಗೂ ರಾಜ್ಯಸಭೆಯಲ್ಲಿ ಸುಮಾರು 98 ಕೋಟಿ ರೂ. ವ್ಯರ್ಥವಾದಂತಾಗಿದೆ.
ಮಂಡನೆಯಾಗದ ವಿಧೇಯಕಗಳು: ಚೊಚ್ಚಲೆಚ್ಚರಿಗ ರಕ್ಷಣೆ (ತಿದ್ದುಪಡಿ) ವಿಧೇಯಕ 2015, ಮಾನಸಿಕ ಆರೋಗ್ಯ ರಕ್ಷಣಾ ವಿಧೇಯಕ 2013, ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ 2013, ಬಾಲ ಕಾರ್ಮಿಕ ತಿದ್ದುಪಡಿ ವಿಧೇಯಕ 2012, ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ವಿಧೇಯಕ 2013, ಬಾಲ ನ್ಯಾಯ ತಿದ್ದುಪಡಿ ವಿಧೇಯಕ 2015 ಮತ್ತು ಸಂವಿಧಾನ (122)ನೇ ತಿದ್ದುಪಡಿ ವಿಧೇಯಕ 2014 ಸೇರಿ ರಾಜ್ಯಸಭೆಯಲ್ಲಿ ಬಾಕಿ ಇರುವ 11 ವಿಧೇಯಕಗಳು ಹಾಗೂ ಒಂಬತ್ತು ಹೊಸ ವಿಧೇಯಕಗಳು ಮಂಡನೆಯಾಗಿ, ಚರ್ಚೆಗೆ ಬರಬೇಕಿತ್ತು.
ಅಲ್ಲದೇ, ರೈಲ್ವೇಗೆ ಅಗತ್ಯ ನಿಧಿ ಹಾಗೂ ಹೆಚ್ಚುವರಿ ನಿಧಿ 2015-2016 ವಿಷಯ ಚರ್ಚೆಗೆ ಬಂದು, ಮತದಾನವೂ ಆಗಬೇಕಿತ್ತು.
‘ಇಡೀ ವಿಶ್ವವೇ ಸಂಸತ್ತಿನ ಕಲಾಪವನ್ನು ವೀಕ್ಷಿಸುತ್ತಿದ್ದು, ಸೂಕ್ತ ಕಲಾಪ ನಡೆಸಲು ಪ್ರತಿಪಕ್ಷಗಳು ಅನುವು ಮಾಡಿಕೊಡಬೇಕೆಂದು,’ ಪ್ರಧಾನಿ ಮೋದಿ ವಿನಂತಿಸಿದ್ದಾರೆ. ‘ಲಲಿತ್ ಗೇಟ್ನಲ್ಲಿ ಭಾಗಿಯಾದ ಸುಷ್ಮಾ ಹಾಗೂ ರಾಜೆ ರಾಜೀನಾಮೆ ನೀಡುವವರೆಗೂ ಕಲಾಪ ನಡೆಯಲು ಬಿಡುವುದಿಲ್ಲ,’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.