ನವದೆಹಲಿ: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ರುವಾರಿ ಯಾಕೂಬ್ ಮೆಮನ್ ನಿರ್ದಿಷ್ಟ ಧರ್ಮಕ್ಕೆ ಸೇರಿದವನಾಗಿದ್ದರಿಂದಲೇ ಆತನನ್ನು ಗಲ್ಲಿಗೇರಿಸಲಾಗುತ್ತಿದೆ ಎಂದು ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೇಹದುಲ್ ಮಸ್ಲಿಮೀನ್ (ಎಐಎಂಐಎ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.
ರಾಜೀವ್ ಗಾಂಧಿಯ ಮತ್ತು ಬೆಂತ್ ಸಿಂಗ್ ಅವರನ್ನು ಹತ್ಯೆ ಮಾಡಿದ ಅಪರಾಧಿಗಳಿಗೆ ತಮಿಳ್ನಾಡು ಮತ್ತು ಪಂಜಾಬ್ನ ರಾಜಕೀಯ ಪಕ್ಷಗಳ ಬೆಂಬಲವಿದೆ. ಯಾಕೂಬ್ ಮೆಮನ್ಗೆ ಯಾವ ರಾಜಕೀಯ ಪಕ್ಷ ಬೆಂಬಲ ನೀಡುತ್ತಿದೆ? ಒಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಬೇಕಿದ್ದರೆ ಆತನ ಧರ್ಮವನ್ನು ಗಣನೆಗೆ ತೆಗೆದುಕೊಳ್ಳಬಾರದು. ನಿರ್ದಿಷ್ಟ ಧರ್ಮವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಒಂದು ಒವೈಸಿ ಹೇಳಿದ್ದಾರೆ.
ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಆರೋಪಿಗಳಾದ ಸಂತಾನಂ, ಮುರುಗನ್ ಮತ್ತು ಪೆರರಿವಾಳನ್ ಅವರನ್ನು ತಮಿಳ್ನಾಡಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ಗಲ್ಲಿಗೇರಿಸದಂತೆ ತಡೆಹಿಡಿದಿವೆ. ಈ ಅಪರಾಧಿಗಳು ಸಲ್ಲಿಸಿದ ದಯಾ ಅರ್ಜಿಯನ್ನು ಸರ್ಕಾರ ಸ್ವೀಕರಿಸಿ ಅವರಿಗೆ ಜೀವಾವಾಧಿ ಶಿಕ್ಷೆ ವಿಧಿಸಿದೆ ಎಂದು ಒವೈಸಿ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ನಂತರ ಸ್ಪಷ್ಟನೆ ನೀಡಿರುವ ಓವೈಸಿ, ‘ಮೆಮೊನ್ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಮಾತನಾಡಿಲ್ಲ. ಆದರೆ, ಆತನ ಮರಣದಂಡನೆಗೆ ಕಾರಣವಾದ ಸಂದರ್ಭವನ್ನು ನಿರ್ಲಕ್ಷಿಸುವಂತಿಲ್ಲ,’ ಎಂದಿದ್ದಾರೆ.
‘ಬಾಬರಿ ಮಸೀದಿ ವಿಷಯ ಪ್ರಸ್ತಾಪಿಸಿದ ಹೈದರಾಬಾದ್ ಸಂಸದ, ಮಸೀದಿ ಕೆಡವಿದ ನಂತರ ನಡೆದ ಕೋಮುಗಲಭೆಗೆ ಸಾವಿರಾರು ಮಂದಿ ಬಲಿಯಾದರು. ಹಲವು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ,’ ಎಂದಿದ್ದಾರೆ
ಉಗ್ರ ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು (ಕ್ಯೂರೇಟಿವ್ ಪಿಟಿಶನ್) ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. 1993ರ ಮಾ.12ರಂದು ಕೇವಲ ಎರಡು ಗಂಟೆ ಅವಧಿಯಲ್ಲಿ ಮುಂಬಯಿಯ 13 ಕಡೆಗಳಲ್ಲಿ ಬಾಂಬ್ಗಳು ಸ್ಫೋಟಗೊಂಡು 250 ಮೃತಪಟ್ಟಿದ್ದರು. 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಜುಲೈ 30 ರಂದು ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು ಈತ ಕಳೆದ ವಾರ ಗವರ್ನರ್ಗೆ ದಯಾ ಅರ್ಜಿ ಸಲ್ಲಿಸಿದ್ದನು.