ಚೆನ್ನೈ; ಸಕ್ಕರೆ ಕಾಯಿಲೆ ಇದೆ ಎಂಬ ಕಾರಣಕ್ಕೆ ಸರ್ಕಾರಿ ಹುದ್ದೆ ನೀಡಲು ನಿರಾಕರಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈನ ನಿವಾಸಿ ಪಿ.ಪುಷ್ಪಂ 2007ರಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿದ್ದರು. ಆದರೆ ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದ್ದು, ಆ ಕಾರಣಕ್ಕೆ ಅವರ ಆಯ್ಕೆಯನ್ನು ರದ್ದು ಗೊಳಿಸಲಾಗಿತ್ತು.
ರೈಲ್ವೆ ಇಲಾಖೆಯ ಈ ಅನ್ಯಾಯದ ವಿರುದ್ಧ ಪುಷ್ಪ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬ ಕಾರಣಕ್ಕೆ ಪುಷ್ಪ ಅವರಿಗೆ ಕೆಲಸವನ್ನು ಹೇಗೆ ನಿರಾಕರಿಸಿದಿರಿ ಎಂದು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ತನ್ನ ಕರ್ತವ್ಯಗಳನ್ನು ಪೂರೈಸಲಾರ ಎಂಬುದನ್ನು ಪುಷ್ಠೀಕರಿಸುವ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದಿರುವ ಕೋರ್ಟ್ ಮಧುಮೇಹ ಕಾಯಿಲೆ ಸರ್ಕಾರಿ ಕೆಲಸ ಪಡೆಯಲು ಇರುವ ಅರ್ಹತೆಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.
ಎಂಟು ವಾರಗಳೊಳಗೆ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ, ವಿ. ರಾಮಸುಬ್ರಣಿಯನ್ ಮತ್ತು ಟಿ ಮತಿವನನ್ ಅವರನ್ನೊಳಗೊಂಡ ವಿಭಾಗೀಯ ಪೀಠ ದಕ್ಷಿಣ ರೈಲ್ವೆಗೆ ನಿರ್ದೇಶನ ನೀಡಿದೆ.
ವಿಶ್ವದ ಮಧುಮೇಹ ರಾಜಧಾನಿ ಎಂಬ ಕುಖ್ಯಾತಿಯನ್ನು ಪಡೆದಿರುವ ಭಾರತದಲ್ಲಿ ಅಂದಾಜು 40.9 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.